ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಜೀವತೆತ್ತವರ ಮೃತದೇಹಗಳನ್ನು ತೆರವು ಮಾಡುವಲ್ಲಿ ಆಗುತ್ತಿರುವ ವಿಳಂಬದಿಂದ ಮನನೊಂದ ಕೊರೊನಾ ಸೋಂಕಿತರೊಬ್ಬರು ಅಳಲು ತೋಡಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿರುದ್ಧ ಸೋಂಕಿತರು ಕಿಡಿಕಾರಿದ್ದಾರೆ. ವಾರ್ಡ್ನಲ್ಲಿ ಇರುವ ಇತರ ಸೋಂಕಿತರು ಮೃತಪಟ್ಟರೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಮೂವರು ರಾತ್ರಿ ಮೃತಪಟ್ಟಿದ್ದಾರೆ. ಹತ್ತು ರೋಗಿಗಳು ಇರುವ ವಾರ್ಡ್ನಲ್ಲಿ ಮೂವರು ಜೀವ ಕಳೆದುಕೊಂಡಿದ್ದು ಉಳಿದವರನ್ನು ಕಂಗೆಡಿಸಿದೆ. ಬೆಳಿಗ್ಗೆ ಹತ್ತು ಗಂಟೆ ಕಳೆದರೂ ಹಾಸಿಗೆಯಿಂದ ಮೃತರನ್ನು ತೆರವು ಮಾಡಿಲ್ಲ. ಯಾವೊಬ್ಬ ಸಿಬ್ಬಂದಿಯೂ ಉಪಚರಿಸಿಲ್ಲ ಎಂದು ವಕೀಲ ಹನುಮಂತರಾಜು ಎಂಬುವರು ವಿಡಿಯೊ ಮಾಡಿ ನೋವು ತೋಡಿಕೊಂಡಿದ್ದಾರೆ.
ಶೌಚಾಲಯದ ಅವ್ಯವಸ್ಥೆಯನ್ನು ಇವರು ಬಹಿರಂಗ ಪಡಿಸಿದ್ದಾರೆ. ಆಹಾರ ಪೂರೈಕೆ, ಚಿಕಿತ್ಸೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ರೋಗಿಗಳು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೊ ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.