ಸುವರ್ಣಾ ಬಸವರಾಜ್
ಹಿರಿಯೂರು: ಇಲ್ಲಿನ ಗೋಪಾಲಪುರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಅಲ್ಪ ಮಳೆಗೂ ಕೆಸರಿನ ಗದ್ದೆಯಂತಾಗುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ಆತಂಕದಲ್ಲಿಯೇ ಶಾಲೆಗೆ ಬರಬೇಕಾದ ಪರಿಸ್ಥಿತಿ ಇದೆ.
ಶಾಲೆಯು 1961ರಲ್ಲಿ ಆರಂಭಗೊಂಡಿದ್ದು, ಒಂದರಿಂದ ಏಳನೇ ತರಗತಿವರೆಗೆ ಕಲಿಕೆಗೆ ಅವಕಾಶವಿದೆ. ಮಂಜೂರಾಗಿರುವ ಎಂಟು ಶಿಕ್ಷಕರಿದ್ದಾರೆ. ಏಳು ಕೊಠಡಿಗಳಿದ್ದು, ಎರಡು ಸಂಪೂರ್ಣ ಶಿಥಿಲಗೊಂಡಿವೆ. ಶಾಲೆಯ ಮುಂಭಾಗದ ರಸ್ತೆ ಎತ್ತರದಲ್ಲಿರುವ ಕಾರಣ ಮಳೆಯ ನೀರು ಹೊರಗೆ ಹರಿಯಲು ಅವಕಾಶವಿಲ್ಲದೆ ಶಾಲಾ ಆವರಣದಲ್ಲಿಯೇ ನೀರು ನಿಲ್ಲುತ್ತದೆ. ಮಳೆ ಬಂದ ದಿನಗಳಂದು ಬೆಳಿಗ್ಗೆಯ ಪ್ರಾರ್ಥನೆಯನ್ನು ಆವರಣದ ಬದಲು ವೆರಾಂಡದಲ್ಲಿ ಮಾಡಿಸಲಾಗುತ್ತಿದೆ. ಕೊಠಡಿಗಳ ಒಳಗಿನ ನೀರನ್ನು ಶಿಕ್ಷಕರೇ ಮೊಗೆದು ಹೊರ ಹಾಕಬೇಕಾದ ಸ್ಥಿತಿ ಇದೆ.
‘ಪ್ರಸ್ತುತ ಶಾಲೆಯಲ್ಲಿ 165 ಮಕ್ಕಳಿದ್ದಾರೆ. ಶೇ 100ರಷ್ಟು ಕೂಲಿಕಾರರ ಮಕ್ಕಳೇ ಇಲ್ಲಿ ದಾಖಲಾಗಿದ್ದಾರೆ. ಮಕ್ಕಳು ಶಾಲೆ ಪ್ರವೇಶಿಸಲು ಶಾಲಾಬ್ಯಾಗ್ ಹೊತ್ತು ಕೆಸರಿನಲ್ಲಿಯೇ ಸಾಗಿ ಬರಬೇಕಿರುವುದರಿಂದ ಜಾರಿ ಬೀಳುವ ಭಯ. ಎರಡು ಕೊಠಡಿಗಳು ಹಾಳಾಗಿರುವ ಕಾರಣ ಪ್ರತ್ಯೇಕವಾಗಿ ತರಗತಿ ನಡೆಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎಂ.ಜಿ. ಗೋಪಾಲ್.
‘ನಗರಸಭೆಯ ಸ್ಥಳೀಯ ವಾರ್ಡ್ ಸದಸ್ಯರು, ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಶಾಲೆಯ ದುರವಸ್ಥೆ ಬಗ್ಗೆ ತಿಂಗಳ ಹಿಂದೆಯೇ ಗಮನಕ್ಕೆ ತರಲಾಗಿತ್ತು. ಶೀಘ್ರವೇ ಸರಿಪಡಿಸುವ ಭರವಸೆ ನೀಡಿದ್ದರು. ಒಡೆದು ಹೋಗಿರುವ ಶಾಲಾಚಾವಣಿಗೆ ಹಾಸಿರುವ ಹೆಂಚು ಮತ್ತು ಶೀಟ್ಗಳನ್ನು ಬದಲಾಯಿಸಿಕೊಡಬೇಕು. ಮಳೆಯ ನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳಬೇಕು’ ಎಂದು ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.