ADVERTISEMENT

ತಂದೆ ಮೇಲೆ ಹಲ್ಲೆ: ಮಗನಿಗೆ ಜೈಲು

ಆಸ್ತಿಯಲ್ಲಿ ಪಾಲು ನಿರಾಕರಿಸಿದ್ದರಿಂದ ನಡೆದ ಕೃತ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 14:58 IST
Last Updated 9 ಏಪ್ರಿಲ್ 2021, 14:58 IST

ಚಿತ್ರದುರ್ಗ: ಆಸ್ತಿಯಲ್ಲಿ ಪಾಲು ನೀಡುವಂತೆ ಪೀಡಿಸಿ ತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪುತ್ರನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆರು ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

ಪಿ.ಹರ್ಷ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. ತಂದೆ ಓ.ಪ್ರಕಾಶ್‌ ಅವರ ಮೇಲೆ 2019ರ ನ.10ರಂದು ಮಚ್ಚಿನಿಂದ ದಾಳಿ ನಡೆಸಿದ್ದನು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್‌.ಚೇಗಾರೆಡ್ಡಿ ಗುರುವಾರ ಆದೇಶ ನೀಡಿದ್ದಾರೆ.

ಗೀತಾ ಹಾಗೂ ಪ್ರಕಾಶ್‌ ದಂಪತಿಯ ಪುತ್ರನಾದ ಹರ್ಷ ಪೋಷಕರೊಂದಿಗೆ ವೈಮನಸು ಬೆಳೆಸಿಕೊಂಡಿದ್ದ. ಏಕಾಏಕಿ ಮನೆಗೆ ನುಗ್ಗಿದ ಅಪರಾಧಿ ಸಿ.ಕೆ.ಪುರದಲ್ಲಿರುವ ಮನೆಯಲ್ಲಿ ಪಾಲು ನೀಡುವಂತೆ ಬೇಡಿಕೆ ಮುಂದಿಟ್ಟಿದ್ದನು. ಇದಕ್ಕೆ ಒಪ್ಪದ ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದನು. ಈ ಸಂಬಂಧ ತಾಯಿ ಗೀತಾ ದೂರು ನೀಡಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಆರ್‌.ನಯೀಂ ಅಹಮ್ಮದ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಂ.ಚಂದ್ರಪ್ಪ ಸರ್ಕಾರದ ಪರ ವಾದ ಮಂಡಿಸಿದ್ದರು.

ಅಣ್ಣನ ಕೊಲೆ: ತಮ್ಮನಿಗೆ ಶಿಕ್ಷೆ

ಕಲ್ಲಿನಿಂದ ತಲೆ ಜಜ್ಜಿ ಅಣ್ಣನನ್ನು ಕೊಲೆ ಮಾಡಿದ ತಮ್ಮನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೊಳಲ್ಕೆರೆಯ ಸಂತೋಷನಾಯ್ಕ್‌ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಸಹೋದರ ಕುಮಾರನಾಯ್ಕ್‌ ಎಂಬುವರನ್ನು ಕೊಲೆ ಮಾಡಿದ್ದನು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್‌.ಚೇಗಾರೆಡ್ಡಿ ಗುರುವಾರ ಆದೇಶ ನೀಡಿದ್ದಾರೆ.

ಕುಮಾರನಾಯ್ಕ್‌ ಹಾಗೂ ಸಂತೋಷನಾಯ್ಕ್‌ ನಡುವೆ ದಾಯಾದಿ ಕಲಹವಿತ್ತು. ಇದರಿಂದ ಕುಪಿತಗೊಂಡ ಸಂತೋಷನಾಯ್ಕ್‌ ಸಹೋದರನನ್ನು ಕೊಲೆ ಮಾಡಲು ಮುಂದಾಗಿದ್ದನು. 2019ರ ಡಿ.30ರಂದು ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ತನಿಖೆ ನಡೆಸಿದ ಹೊಳಲ್ಕೆರೆ ಸಿಪಿಐ ಕೆ.ಎನ್‌.ರವೀಶ್‌ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಂ.ಚಂದ್ರಪ್ಪ ಸರ್ಕಾರದ ಪರ ವಾದ ಮಂಡಿಸಿದ್ದರು.

ಬಾಲಕನ ಕೊಲೆ: ಚಿಕ್ಕಪ್ಪನಿಗೆ ಜೈಲು

ಆಸ್ತಿಯಲ್ಲಿ ಪಾಲು ಸಿಗುವುದಿಲ್ಲವೆಂದು ಭಾವಿಸಿ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಅಪರಾಧಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಚಳ್ಳಕೆರೆ ತಾಲ್ಲೂಕಿನ ಬೋಸೆದೇವರಹಟ್ಟಿ ಗ್ರಾಮದ ಚಿರಂಜೀವಿ ಶಿಕ್ಷೆಗೆ ಗುರಿಯಾದ ಅಪರಾಧಿ. ಸಹೋದರನ ಪುತ್ರ ಗೋವಿಂದ ಅಜಿತ್‌ ಎಂಬ ಬಾಲಕನನ್ನು 2020ರ ಮಾರ್ಚ್‌ 4ರಂದು ಕೊಲೆ ಮಾಡಿದ್ದನು.

ಆಸ್ತಿಯಲ್ಲಿ ಪಾಲು ನಿರಾಕರಿಸಿದ್ದರಿಂದ ಕುಪಿತಗೊಂಡ ಆರೋಪಿಯು ಈ ಕೃತ್ಯ ಎಸಗಿದ್ದನು. ಪಾರಿವಾಳ ತೋರಿಸುವ ಆಸೆ ಹುಟ್ಟಿಸಿ ಬಾಲಕನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ ಎಂಬುದು ನಾಯಕನಹಟ್ಟಿ ಠಾಣೆಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.