ADVERTISEMENT

ಹಿರಿಯೂರು: ಈಜಲು ಹೋಗಿ ಇಬ್ಬರು ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:23 IST
Last Updated 8 ಆಗಸ್ಟ್ 2021, 4:23 IST
ರಘು
ರಘು   

ಹಿರಿಯೂರು: ತಾಲ್ಲೂಕಿನ ವದ್ದೀಗೆರೆ ಗ್ರಾಮದಲ್ಲಿ ಶನಿವಾರ ಸಂಜೆ ಗೆಳೆಯರ ಜೊತೆ ಕೃಷಿ ಹೊಂಡಕ್ಕೆ ಈಜು ಕಲಿಯಲು ಹೋಗಿದ್ದ ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪ್ರಕಾಶ್ ಅವರ ಪುತ್ರ ರಘು (13), ವೆಂಕಟೇಶ್ ಅವರ ಪುತ್ರ ಸಿದ್ದೇಶ್ (10) ಮೃತಪಟ್ಟಿರುವ ಬಾಲಕರು. ಆರನೇ ತರಗತಿ ಓದುತ್ತಿದ್ದ ಇಬ್ಬರೂ ಪೋಷಕರ ಹಿರಿಯ ಮಕ್ಕಳಾಗಿದ್ದರು.

ವದ್ದೀಗೆರೆ ಗ್ರಾಮದ ಎಕೆ ಕಾಲೊನಿ ಸಮೀಪ ಇರುವ ಗೋವಿಂದಪ್ಪ ಎಂಬ ರೈತರ ಜಮೀನಿನಲ್ಲಿಯ ಕೃಷಿ ಹೊಂಡಕ್ಕೆ ಬಾಲಕರಾದ ರಘು, ಸಿದ್ದೇಶ್, ನವೀನ್, ಕುಮಾರ್ ಹಾಗೂ ರಘು ತಮ್ಮ ಸಿದ್ದೇಶ್ ಈಜಲು ಹೋಗಿದ್ದರು.

ADVERTISEMENT

ಸಿದ್ದೇಶ್ ಮತ್ತು ತನ್ನ ಅಣ್ಣ ರಘು ನೀರಿನಲ್ಲಿ ಮುಳುಗಿದ್ದನ್ನು ನೋಡಿದ ಪ್ರಕಾಶ್ ಅವರ ಕಿರಿಯ ಪುತ್ರ ಸಿದ್ದೇಶ್ (6) ಮನೆಗೆ ಓಡಿ ಬಂದು ಸುದ್ದಿ ಮುಟ್ಟಿಸಿದ. ತಕ್ಷಣ ಕಾಲೊನಿಯಲ್ಲಿದ್ದವರು ಓಡಿ ಹೋಗಿ ಮಕ್ಕಳಿಬ್ಬರನ್ನು ನೀರಿನಿಂದ ಮೇಲೆತ್ತಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಯ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಪ್ರಕರಣ ದಾಖಲು ಮಾಡಿಕೊಂಡಿರುವ ಐಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಕಾಶ್ ಮತ್ತು ವೆಂಕಟೇಶ್ ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.