ADVERTISEMENT

ಬಾಲ ಬಿಚ್ಚಿದರೆ ಗಡಿಪಾರು: ರೌಡಿ ಶೀಟರ್‌ಗಳಿಗೆ ಡಿವೈಎಸ್ಪಿ ಪಾಂಡುರಂಗಪ್ಪ ಎಚ್ಚರಿಕೆ

ರೌಡಿ ಶೀಟರ್‌ಗಳಿಗೆ ಡಿವೈಎಸ್‌ಪಿ ಪಾಂಡುರಂಗಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 14:15 IST
Last Updated 12 ಡಿಸೆಂಬರ್ 2020, 14:15 IST
ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಚಿತ್ರದುರ್ಗದಲ್ಲಿ ಶನಿವಾರ ಡಿವೈಎಸ್‌ಪಿ ಪಾಂಡುರಂಗಪ್ಪ ಅವರು ರೌಡಿ ಶೀಟರ್‌ಗಳ ಪರೇಡ್‌ ನಡೆಸಿದರು
ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಚಿತ್ರದುರ್ಗದಲ್ಲಿ ಶನಿವಾರ ಡಿವೈಎಸ್‌ಪಿ ಪಾಂಡುರಂಗಪ್ಪ ಅವರು ರೌಡಿ ಶೀಟರ್‌ಗಳ ಪರೇಡ್‌ ನಡೆಸಿದರು   

ಚಿತ್ರದುರ್ಗ: ‘ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಯಾವುದೇ ರೀತಿಯ ದುಷ್ಕೃತ್ಯಗಳಿಗೂ ಕೈ ಹಾಕಬಾರದು. ಒಂದು ವೇಳೆ ಅಹಿತಕರ ಘಟನೆ ನಡೆದರೆ, ಬಾಲ ಬಿಚ್ಚಿದರೆ ಗಡಿಪಾರು ಮಾಡಲಾಗುವುದು’ ಎಂದು ಡಿವೈಎಸ್‌ಪಿ ಪಾಂಡುರಂಗಪ್ಪ ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ 100ಕ್ಕೂ ಹೆಚ್ಚು ರೌಡಿ ಶೀಟರ್ಗಳ ಪರೇಡ್‌ ನಡೆಸಿದ ಅವರು, ‘ಚುನಾವಣಾ ಅಕ್ರಮದಲ್ಲಿ ಪಾಲ್ಗೊಳ್ಳುವುದು, ಅಮಾಯಕರ ಬಳಿ ವಸೂಲಾತಿ ಮಾಡುವುದು, ದೌರ್ಜನ್ಯಕ್ಕೆ ಮುಂದಾಗುವುದು ಸೇರಿ ಯಾವುದೇ ರೀತಿಯ ಕೃತ್ಯ ಎಸಗಿದ್ದಲ್ಲಿ ಮೊದಲು ರೌಡಿಗಳೇ ನೇರ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಚಿಕ್ಕಪುಟ್ಟ ಗಲಭೆಗೆ ಪ್ರಚೋದನೆ ನೀಡಿದರೂ ಮುಲಾಜಿಲ್ಲದೇ ಬಂಧಿಸಲಾಗುವುದು. ಚುನಾವಣೆ ಸಂಬಂಧ ಎರಡು ತಾಲ್ಲೂಕುಗಳಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕು. ಅದಕ್ಕೆ ಧಕ್ಕೆ ಉಂಟಾದರೂ ನಿಮ್ಮನ್ನೇ ಮೊದಲು ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಚ್ಚರವಿರಲಿ’ ಎಂದು ತಿಳಿಸಿದರು.

ADVERTISEMENT

‘ಇದೇ ವೇಳೆ ನಿವೃತ್ತ ಕಾನ್‌ಸ್ಟೆಬಲ್‌ ಮಗನೊಬ್ಬನನ್ನೂ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ಡಿವೈಎಸ್‌ಪಿ ಮರ್ಯಾದೆಯಿಂದ ಬದುಕುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

‘ನೀನೂ ದೊಡ್ಡ ರೌಡಿಯೇ? ನಿನಗೆ ಜನ ಹೆದರಬೇಕೆ’ ಎಂದು ರೌಡಿಯೊಬ್ಬನನ್ನು ಗದರಿಸಿದರು. ‘ನನ್ನ ಮೇಲೆ ಯಾವ ಪ್ರಕರಣ ಇದೆ ಎಂಬುದೇ ಗೊತ್ತಿಲ್ಲ ಸರ್’ ಎಂದು ಆತ ಹೇಳಿದಾಗ ಗರಂ ಆದ ಪಾಂಡುರಂಗಪ್ಪ, ‘ಈತನನ್ನು ಗಡಿಪಾರಿಗೆ ಶಿಫಾರಸು ಮಾಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.