ಚಿತ್ರದುರ್ಗ: ‘ಶತಮಾನಗಳಿಂದಲೂ ಶಿವನ ಆರಾಧನೆಯಲ್ಲಿ ತೊಡಗಿರುವ ಶ್ರೀಮಠವೂ ಐದು ದಿನಗಳವರೆಗೆ ಮಹಾಶಿವರಾತ್ರಿ ಮಹೋತ್ಸವವನ್ನು ಸದ್ಭಕ್ತಿಯಿಂದ ಆಚರಿಸುತ್ತ, ಶೈವತತ್ವ ಪ್ರಚಾರ ಪಡಿಸುತ್ತಿದೆ’ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಕಬೀರಾನಂದಾಶ್ರಮದಲ್ಲಿ ಭಾನುವಾರ ಆರಂಭವಾದ 91ನೇ ಮಹಾಶಿವರಾತ್ರಿ ಮಹೋತ್ಸವದ ಮಹಾಮಂಟಪ ಉದ್ಘಾಟಿಸಿ ಮಾತನಾಡಿದರು.
‘ಆಶ್ರಮವೂ ಶಿವನಾಮ ಸ್ಮರಣೆ ಅಷ್ಟೇ ಅಲ್ಲ. ಅನೇಕ ಜನಾಂಗದವರನ್ನು ಒಗ್ಗೂಡಿಸಿ, ಜಾತಿರಹಿತವಾಗಿ ಸಮಸಮಾಜಕ್ಕಾಗಿ ಶ್ರಮಿಸುತ್ತಿದೆ. ಗೋ ಮಾತೆಯ ಸಂರಕ್ಷಣೆಗೂ ಒತ್ತು ನೀಡಿರುವುದು ಶ್ಲಾಘನೀಯ’ ಎಂದು ಬಣ್ಣಿಸಿದರು.
‘ಮಠ ಎಂದರೆ ಯಾವುದೇ ಧರ್ಮ, ಜಾತಿಗೆ ಮೀಸಲಾಗಿರದೆ ಸರ್ವರ ಬೆಳವಣಿಗಾಗಿ ಶ್ರಮಿಸಬೇಕು. ಮಠಾಧೀಶರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಒಂದು ಜಾತಿ, ಧರ್ಮದ ಮುಖವಾಣಿಯಾಗಿ ಎಂದಿಗೂ ಕೆಲಸ ಮಾಡಬಾರದು’ ಎಂದರು.
ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್. ನವೀನ್, ‘ಪ್ರಕೃತಿ ವಿರುದ್ಧ ನಡೆದುಕೊಂಡ ಮಾನವನಿಗೆ ಅದೇ ತಕ್ಕ ಪಾಠ ಕಲಿಸಿದೆ. ಕೊರೊನಾ ವೈರಸ್ ಮೂಲಕ ಮಾನವನ ಆಹಂಕಾರ ತಗ್ಗಿಸುವಂತೆ ಮಾಡಿದೆ’ ಎಂದು ಅಭಿಪ್ರಾಯಪಟ್ಟರು.
ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಹುಬ್ಬಳಿಯ ಜಡೇ ಸಿದ್ಧೇಶ್ವರ ಮಠದ ರಮಾನಂದ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಇದೇ ವೇಳೆ ರಾಷ್ಟ್ರಪತಿ ಪದಕ ವಿಜೇತ ಸಿಪಿಐ ಬಾಲಚಂದ್ರನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಮುಖಂಡರಾದ ಸಿದ್ದೇಶ್ಯಾದವ್, ನಂದಿ ನಾಗರಾಜ್, ಸಂದೀಪ್ ಗುಂಡಾರ್ಪಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಉತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್, ಹುರುಳಿ ಬಸವರಾಜ್ ಇದ್ದರು. ಕಬೀರಾನಂದಸ್ವಾಮಿ ವಿದ್ಯಾಪೀಠದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.