ADVERTISEMENT

ಕಂಪನಿ ಮುಚ್ಚಲು ರೈತರ ಆಗ್ರಹ

ಪ್ರಕಾಶ್ ಸ್ಪಾಂಜ್ ಐರನ್ ಪವರ್ ಕಂಪೆನಿ ಕಂಪನಿ ವಿರುದ್ಧ ಸಭೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 2:52 IST
Last Updated 25 ನವೆಂಬರ್ 2020, 2:52 IST
ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಗ್ರಾಮದ ಬಳಿ ಮಂಗಳವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರೈತರು
ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಗ್ರಾಮದ ಬಳಿ ಮಂಗಳವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರೈತರು   

ಚಳ್ಳಕೆರೆ: ‘ಬೆಳೆ, ರೈತರು ಮತ್ತು ಜಾನುವಾರುಗಳಿಗೆ ತೊಂದರೆ ಆದರೆ ಸುಮ್ಮನೆ ಕೂರುವುದಿಲ್ಲ. ಕಂಪನಿ ಉಗುಳುವ ಹೊಗೆಯಿಂದ ಈಗಾಗಲೇ ಹೊಲದಲ್ಲಿನ ರೈತರ ಫಸಲು ಸಂಪೂರ್ಣ ಹಾಳಾಗಿದೆ. ಮೇವು ತಿಂದ ದನಕರುಗಳಿಗೆ ಗಂಟಲು ಮತ್ತು ಕಾಲು ಬಾಯಿ ರೋಗ ಕಾಣಿಸಿಕೊಂಡಿದೆ’ ಎಂದು ರೈತ ಸಂಘದ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ದೂರಿದರು.

ತಾಲ್ಲೂಕಿನ ಜಡೇಕುಂಟೆ, ಕಾಪರಹಳ್ಳಿ, ಹೊಟ್ಟೆಜ್ಜನಕಪಿಲೆ, ಹೆಗ್ಗೆರೆ, ಹುಲಿಕುಂಟೆ, ಹಿರಿಯೂರು ತಾಲ್ಲೂಕು ಕಂದಿಕೆರೆ, ಗೊಲ್ಲಹಳ್ಳಿ ಗ್ರಾಮದ ರೈತರ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಮಂಗಳವಾರ ಹೆಗ್ಗೆರೆ ಗ್ರಾಮದ ಬಳಿ ಇರುವ ಪ್ರಕಾಶ್ ಸ್ಪಾಂಜ್ ಐರನ್ ಪವರ್ ಕಂಪನಿ ಆವರಣದಲ್ಲಿ ನಡೆಸಿದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

‘ರೈತರ ಕೃಷಿ ಚಟುವಟಿಕೆ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು’ ಕಂಪನಿ ಮಾಲೀಕರಲ್ಲಿ ಮನವಿ ಮಾಡಿದರು.

ADVERTISEMENT

ವನ್ಯಜೀವಿ ತಜ್ಞ ವಲ್ಲೀಶ್‍ವಾಸುಕಿ, ‘ಐರನ್ ಪವರ್ ಕಂಪನಿಯ ಸುತ್ತ 10-15 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಜನ ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತದೆ. ಕಾರ್ಖಾನೆ ಉಗುಳುವ ಹೊಗೆ ಹಾಗೂ ದೂಳು ಬೆಳೆಗಳನ್ನು ಆವರಿಸಿಕೊಂಡಿದೆ. ಬೆಳೆ ಮಧ್ಯೆ ನಡೆದಾಡಿದರೆ ಕಪ್ಪುಬಣ್ಣದ ಮಸಿ ಕಾಲಿಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಕೂಡಲೇ ಐರನ್ ಕಂಪನಿಯನ್ನು ಮುಚ್ಚಬೇಕು’ ಎಂದು ಒತ್ತಾಯಿಸಿದರು.

ಗ್ರಾಮದ ಮುಖಂಡ ನಾಗರಾಜ, ‘ಕಂಪನಿ ಇರುವ ಕಾರಣ ಗ್ರಾಮದ ನೂರಾರು ಜನರಿಗೆ ಉದ್ಯೋಗ ದೊರೆತಿದೆ. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ’
ಎಂದರು.

ಕೃಷಿ ವಿಜ್ಞಾನಿ ಡಾ.ಮಂಜುನಾಥ್, ತೇಜಸ್ವಿ ಪಟೇಲ್, ಚೇತನ್, ಹಿರೇಮಠ್, ಮಲ್ಲಿಕಾರ್ಜುನ ಭಟ್ಟರಹಳ್ಳಿ ಮಾತನಾಡಿದರು. ಹೋರಾಟಗಾರ ಜೋಸೆಫ್‌ಹೂವರ್, ತಿಪ್ಪೇಸ್ವಾಮಿ, ನಾಗರಾಜ, ರಂಗಸ್ವಾಮಿ, ತಿಮ್ಮಣ್ಣ, ರಂಗಪ್ಪ, ರಾಜಣ್ಣ, ಮಹೇಶ್, ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.