ADVERTISEMENT

ಅಲೆಮಾರಿ ಜನಾಂಗಗಳಿಗೆ ಸೌಲಭ್ಯ ಕೊಡಿಸಲು ಹೋರಾಟ: ಚಿತ್ರನಟ ಚೇತನ್

ವಿವಿಧ ಕಾಲೊನಿಗಳಿಗೆ ಚೇತನ್ ಭೇಟಿ, ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 12:36 IST
Last Updated 12 ಮಾರ್ಚ್ 2019, 12:36 IST
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರಕ್ಕೆ ಚಿತ್ರನಟ ಚೇತನ್ ಮಂಗಳವಾರ ಭೇಟಿ ನೀಡಿ ಸುಡುಗಾಡ ಸಿದ್ಧರ ಜೀವನಶೈಲಿ ಮಾಹಿತಿ ಸಂಗ್ರಹಿಸಿದರು
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರಕ್ಕೆ ಚಿತ್ರನಟ ಚೇತನ್ ಮಂಗಳವಾರ ಭೇಟಿ ನೀಡಿ ಸುಡುಗಾಡ ಸಿದ್ಧರ ಜೀವನಶೈಲಿ ಮಾಹಿತಿ ಸಂಗ್ರಹಿಸಿದರು   

ಮೊಳಕಾಲ್ಮುರು: ರಾಜ್ಯದ ವಿವಿಧ ಭಾಗದಲ್ಲಿರುವ ಅಲೆಮಾರಿ ಜನಾಂಗಗಳ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲು ಹೋರಾಟ ನಡೆಸಲಾಗುವುದು ಎಂದು ಚಿತ್ರನಟ ಚೇತನ್ ಹೇಳಿದರು.

ತಾಲ್ಲೂಕಿನ ರಾಯಾಪುರ ಕ್ರಾಸ್‌ನಲ್ಲಿರುವ ಸುಡುಗಾಡ ಸಿದ್ಧರ ಕಾಲೊನಿಗೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.
ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದೊಂಬಿದಾಸ, ಹಕ್ಕಿ-ಪಿಕ್ಕಿ, ಸುಡುಗಾಡ ಸಿದ್ಧರು, ದಾಸಯ್ಯಗಳು ಸೇರಿ ಹತ್ತಾರು ಅಲೆಮಾರಿ ಜನಾಂಗಗಳು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳು ಪುಸ್ತಕಗಳಲ್ಲಿ ಮಾತ್ರ ಸೌಲಭ್ಯ ತೋರಿಸುತ್ತಿದ್ದಾರೆ. ಇದರ ಪರಿಣಾಮ ಈ ಜನಾಂಗದವರು ವಸತಿ, ಶಿಕ್ಷಣ, ಆರೋಗ್ಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ 'ಹಣೆಬರಹ' ಎಂಬ ಶೀರ್ಷಿಕೆಯನ್ನು ಹೇಳುತ್ತಾ ಜೀವನ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

‘ಕೊಡಗು ಜಿಲ್ಲೆಯಲ್ಲಿ ಅರಣ್ಯ ವಾಸಿಗಳಿಗೆ ಸೌಲಭ್ಯ ಕೊಡಿಸಲು ನಡೆಸಿದ ಹೋರಾಟ ಮಾದರಿಯಲ್ಲಿ ಅಲೆಮಾರಿಗಳಿಗೂ ಸೌಲಭ್ಯ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ನನ್ನ ನೇತೃತ್ವದಲ್ಲಿ ‘ಯುವ ಕರ್ನಾಟಕ ವೇದಿಕೆ’ ಸ್ಥಾಪಿಸಲಾಗಿದೆ. ಈಗಾಗಲೇ ರಾಜ್ಯದ ಯಾದಗಿರಿ, ರಾಯಚೂರು, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಿ ಅಲೆಮಾರಿಗಳ ಮಾಹಿತಿ ಸಂಗ್ರಹಿಸಿಲಾಗಿದೆ. ಕುಲಶಾಸ್ತ್ರ ಅಧ್ಯಯನ ಮಾಡಿಸುವ ಮೂಲಕ ಜಾತಿ ಪ್ರಮಾಣಪತ್ರ ಕೊಡಿಸಲಾಗುವುದು. ಅನೇಕ ಕಡೆ ಅಲೆಮಾರಿ ಜನಾಂಗದವರು ಜಾತಿ ಪ್ರಮಾಣಪತ್ರ ಪಡೆಯುವುದು ಸವಾಲಿನ ಕೆಲಸ’ ಎಂದು ಚೇತನ್ ಹೇಳಿದರು.

ADVERTISEMENT

ಅಭಿಯಾನ ಮಾದರಿಯಲ್ಲಿ ಅಲೆಮಾರಿ ಜನಾಂಗಗಳಿಗೆ ನ್ಯಾಯ ಕೊಡಿಸಲು ಚಿಂತಿಸಲಾಗಿದೆ. ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿ ಸಮಾಜದ ಮುಖ್ಯವಾಹಿನಿಗೆ ಕರೆತರಲಾಗುವುದು. ಜನಾಂಗಕ್ಕೆ ಅಧ್ಯಯನ ಕೇಂದ್ರ ಸ್ಥಾಪಿಸಿ ಅವರ ಕಸುಬು, ನಡೆದು ಬಂದ ಹಾದಿಗಳನ್ನು ಅನಾವರಣ ಮಾಡಲಾಗುವುದು. ಇದಕ್ಕಾಗಿ ಅಂಕಿ-ಅಂಶ ಸಂಗ್ರಹಿಸಲಾಗುತ್ತದೆ ಎಂದರು.

ಇದೇ ವೇಳೆ ಅವರು ಕಾಲೋನಿ ಮನೆಗಳಿಗೆ ಭೇಟಿ ನೀಡಿ ಜೀವನ ಶೈಲಿ, ದುಡಿಮೆ ಮಾರ್ಗಗಳ ಮಾಹಿತಿ ಸಂಗ್ರಹಿಸಿದರು. ನಂತರ ಸಮೀಪದ

ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಶಾಖಾಮಠಕ್ಕೆ ಭೇಟಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಜಿ.ಪಿ. ಸುರೇಶ್, ವೈ.ಡಿ. ಬಸವರಾಜ್, ಲೋಕೇಶ್ ಪಲ್ಲವಿ, ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.