ಚಿತ್ರದುರ್ಗ: ‘ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದು ಬಾಕಿ ಕೊಡುವುದು ತಡವಾಗಿರಬಹುದು. ಇದೇನು ತಿಂಗಳ ಸಂಬಳದ ರೀತಿಯಲ್ಲ. ಯಾವುದೇ ಸಮಸ್ಯೆಗಳಿದ್ದರೂ ಸರಿಪಡಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
‘ಗ್ಯಾರಂಟಿ ಯೋಜನೆಗಳ ಬಾಕಿ ಹಣವನ್ನು ಮಾರ್ಚ್ನೊಳಗೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಬೇರೆ ಬೇರೆ ಕಾರಣಗಳಿಗೆ ತಡವಾಗಿದೆ. ಶೀಘ್ರ ಫಲಾನುಭವಿಗಳ ಖಾತೆಗೆ ಹಣ ಬರಲಿದೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
‘ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಶೂನ್ಯ ಬಿಲ್ ಬರುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಬಾಕಿ ಕುರಿತಂತೆ ಆಯಾ ಸಚಿವರೇ ಉತ್ತರ ನೀಡುತ್ತಾರೆ’ ಎಂದರು.
ಸಿದ್ದರಾಮಯ್ಯ ಹಣಕಾಸು ಸಚಿವರಾಗಲು ಲಾಯಕ್ ಇಲ್ಲ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈಶ್ವರಪ್ಪ ಯಾವುದಕ್ಕೆ ಲಾಯಕ್ಕು ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಏನನ್ನೂ ಕೊಡಲಿಲ್ಲ. ಚುನಾವಣೆ ಸಮಯದಲ್ಲಿ ಈಗ ಮೋದಿ ಅವರು ಕೊಡುತ್ತಿರುವುದು ಗ್ಯಾರಂಟಿಯಲ್ಲವೇ ಎಂಬುದನ್ನು ಪ್ರಶ್ನಿಸಲಿ. ಮುಖ್ಯಮಂತ್ರಿಗಳು ಎಂತಹ ದಕ್ಷ ಹಣಕಾಸು ಸಚಿವರು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.