ADVERTISEMENT

ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 13:04 IST
Last Updated 31 ಅಕ್ಟೋಬರ್ 2021, 13:04 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ ಅವರು ಬೌದ್ಧ ಧರ್ಮ ದೀಕ್ಷೆ ನೀಡಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ ಅವರು ಬೌದ್ಧ ಧರ್ಮ ದೀಕ್ಷೆ ನೀಡಿದರು.   

ಚಿತ್ರದುರ್ಗ: ಹಿಂದೂ ಧರ್ಮದ 103 ಜನರು ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಭಾನುವಾರ ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಉಪಾಸಕ ಹಾಗೂ ಉಪಾಸಕಿಯರಾಗಿ ಬುದ್ಧನ ಮಾರ್ಗದಲ್ಲಿ ಸಾಗುವುದಾಗಿ ಪ್ರತಿಜ್ಞೆ ಮಾಡಿದರು.

ತರಾಸು ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ ಬೌದ್ಧ ಧರ್ಮ ದೀಕ್ಷೆ ನೀಡಿದರು. ಪಂಚಶೀಲತತ್ವಗಳನ್ನು ಪಠಿಸುವ ಮೂಲಕ ಹೊಸ ಧರ್ಮಕ್ಕೆ ಪದಾರ್ಪಣೆ ಮಾಡಿದರು. ಇದರಲ್ಲಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯದವರೇ ಹೆಚ್ಚಾಗಿದ್ದರು. ಗೊಲ್ಲ ಹಾಗೂ ಲಿಂಗಾಯತ ಸಮುದಾಯದ ತಲಾ ಒಬ್ಬರು ಬೌದ್ಧ ಧರ್ಮ ದೀಕ್ಷೆ ಪಡೆದರು.

‘ಇದೊಂದು ಜಾತಿಯಲ್ಲ ಧರ್ಮ. ಜಾತಿಯನ್ನು ಮೀರಿದ ತತ್ವಗಳು ಇಲ್ಲಿವೆ. ಜಾತಿ ಮನೋಭಾವದಿಂದ ಪ್ರತಿಯೊಬ್ಬರು ಹೊರಗೆ ಬರುವ ಅಗತ್ಯವಿದೆ. ಧರ್ಮ ದೀಕ್ಷೆಯನ್ನು ಸಾಮಾಜಿಕ ಪರಿವರ್ತನೆ ಎಂಬಂತೆ ಬಿಂಬಿಸಬೇಡಿ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ’ ಎಂದು ಆನಂದ ಬಂತೇಜಿ ಹೇಳಿದರು.

ADVERTISEMENT

‘ಇದು ಮೂಲತಃ ಭಾರತದಲ್ಲಿ ಜನ್ಮತಳೆದ ಧರ್ಮ. ಭಾರತೀಯ ಸಂಸ್ಕೃತಿ, ಆಚಾರ–ವಿಜಾರಗಳು ಇದರಲ್ಲಿ ಬೆಸೆದುಕೊಂಡಿವೆ. ಇದೇ ಉದ್ದೇಶದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು. ಇದರೊಂದಿಗೆ ದೇಶವನ್ನೂ ಉಳಿಸಿದರು. ಅವರು ಬೇರೆ ಧರ್ಮದ ದೀಕ್ಷೆ ಪಡೆದಿದ್ದರೆ ದೇಶದಲ್ಲಿ ಕ್ಷೋಭೆ ಸೃಷ್ಟಿಯಾಗುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.