ಹಿರಿಯೂರು: ತಾವು ಸಾಮಾನ್ಯರಂತೆ ಇಲ್ಲ, ಇದ್ದಿದ್ದರೆ ಚೆನ್ನಾಗಿತ್ತು ಎಂಬ ಆಲೋಚನೆ ಅಂಗವಿಕಲರಲ್ಲಿ ಬರುವುದು ಸಹಜ. ಎಷ್ಟೋ ಅಂಗವಿಕಲರು ಎಲ್ಲರಿಗಿಂತ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಂಡ ನಿದರ್ಶನಗಳಿವೆ. ಅಂಗವಿಕಲರು ಆತ್ಮವಿಶ್ವಾಸದ ಮೇಲೆ ನಂಬಿಕೆ ಇಟ್ಟು ಬದುಕು ಸಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.
ನಗರದಲ್ಲಿ ಭಾನುವಾರ 2024–25ನೇ ಸಾಲಿನಲ್ಲಿ ವಿಕಲ ಚೇತನ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗುವ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
‘ನಮ್ಮ ಸರ್ಕಾರ ಅಂಗವಿಕಲರಿಗೆ ಕೇವಲ ಕರುಣೆ ತೋರಿಸದೆ ಹಲವು ಯೋಜನೆಗಳನ್ನು ಜಾರಿಗೊಳಿ ಸ್ವತಂತ್ರವಾಗಿ ಬದುಕುವ ಹಾದಿಯನ್ನು ಕಲ್ಪಿಸಿಕೊಟ್ಟಿದೆ. ಜನರು ದೈಹಿಕ ವೈಕಲ್ಯವನ್ನು ಆಡಿಕೊಂಡು ಅವಹೇಳನ ಮಾಡಬಾರದು. ಅದು ರಾಕ್ಷಸೀತನವಾಗುತ್ತದೆ’ ಎಂದರು.
ತ್ರಿಚಕ್ರ ವಾಹನಗಳನ್ನು ಕಚೇರಿ ಕೆಲಸಗಳಿಗೆ, ತೋಟ–ಜಮೀನುಗಳಿಗೆ, ಸಣ್ಣಪುಟ್ಟ ವಹಿವಾಟು ನಡೆಸುವ ಅಂಗಡಿಗಳಿಗೆ ಹೋಗಿ–ಬರಲು ಬಳಸಬೇಕು. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಸದಾ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಸಚಿವರು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಎಂ.ಎಸ್. ಈರಲಿಂಗೇಗೌಡ, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತ, ಸದಸ್ಯರಾದ ಸುರೇಖಾಮಣಿ, ಜಗದೀಶ್, ಗುಂಡೇಶ್, ವಿಠ್ಠಲ್, ಮುಖಂಡರಾದ ಕಂದಿಕೆರೆ ಸುರೇಶ್ ಬಾಬು, ವಿ. ಶಿವಕುಮಾರ್, ಗಿರೀಶ್ ನಾಯಕ್, ಜ್ಞಾನೇಶ್, ಗುರುಪ್ರಸಾದ್, ರಾಜೇಂದ್ರ, ದರ್ಶನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.