ADVERTISEMENT

ಬ್ಯಾಂಕ್‌ನ ಯಶಸ್ಸಿಗೆ ಗ್ರಾಹಕರ ವಿಶ್ವಾಸ ಮುಖ್ಯ

ವಿಕಾಸ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಈಶ್ವರಾನಂದಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:09 IST
Last Updated 14 ಡಿಸೆಂಬರ್ 2018, 17:09 IST
ಹೊಸದುರ್ಗದ ವಿಕಾಸ ಪತ್ತಿನ ಸಹಕಾರಿ ಸಂಘವನ್ನು ಶುಕ್ರವಾರ ವಿವಿಧ ಮಠಾಧೀಶರು ಉದ್ಘಾಟಿಸಿದರು
ಹೊಸದುರ್ಗದ ವಿಕಾಸ ಪತ್ತಿನ ಸಹಕಾರಿ ಸಂಘವನ್ನು ಶುಕ್ರವಾರ ವಿವಿಧ ಮಠಾಧೀಶರು ಉದ್ಘಾಟಿಸಿದರು   

ಹೊಸದುರ್ಗ: ಸಹಕಾರಿ ಬ್ಯಾಂಕ್‌ನ ಯಶಸ್ಸಿಗೆ ಗ್ರಾಹಕರ ನಂಬಿಕೆ, ವಿಶ್ವಾಸ ಬಹಳ ಮುಖ್ಯ ಎಂದು ಕೆಲ್ಲೋಡು ಕಾಗಿನೆಲೆ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹುಳಿಯಾರು ರಸ್ತೆಯ ವಿಜಯ ಬ್ಯಾಂಕ್‌ನ 1ನೇ ಅಂತಸ್ತಿನ ಕಟ್ಟಡದಲ್ಲಿ ಶುಕ್ರವಾರ ವಿಕಾಸ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಸಹಕಾರ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದೆ. ನೂತನವಾಗಿ ಸಂಘ ಸ್ಥಾಪಿಸಿರುವ ವಿಕಾಸ ಪತ್ತಿನ ಸಹಕಾರಿ ಸಂಘದವರು ಗ್ರಾಹಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡು, ಉತ್ತಮ ಸೇವೆ ಒದಗಿಸಬೇಕು. ಠೇವಣಿದಾರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ಹಾಲುಮತದ ಸಂಸ್ಕೃತಿಯಂತೆ ಕೌಂಟರ್‌ನಲ್ಲಿ ಭಂಡಾರವನ್ನು ದಾನದ ರೂಪದಲ್ಲಿ ದೇಣಿಗೆ ನೀಡಿದ್ದೇನೆ. ಈ ಬ್ಯಾಂಕ್‌ ಎತ್ತರಕ್ಕೆ ಬೆಳೆಯಲಿ ಎಂಬ ಶುಭ ಆರೈಸಿದರು.

ADVERTISEMENT

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ‘ಪತ್ತಿನ ಸಹಕಾರಿ ಸಂಘ ಅಭಿವೃದ್ಧಿ ಸಾಧಿಸಬೇಕಾದರೆ, ಸಂಘದ ಆಡಳಿತ ಮಂಡಳಿಯವರ ನಡುವೆ ನಂಬಿಕೆ ಹಾಗೂ ಪ್ರಾಮಾಣಿಕತೆ ಇರಬೇಕು. ಸಾಲಗಾರರ ಹಣ ಮರುಪಾವತಿಗೆ ಬಿಗಿಯಾದ ಕ್ರಮ ಕೈಗೊಳ್ಳಬೇಕು. ಹಣಕಾಸಿನ ಅವಶ್ಯಕತೆ ಇರುವವರಿಗೆ ಸಾಲ ಸೌಲಭ್ಯ ನೀಡಬೇಕು ಎಂದು ಸಲಹೆ ನೀಡಿದರು.

‘ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಹೊಸದುರ್ಗ ತಾಲ್ಲೂಕಿನಲ್ಲಿ ಇರುವಷ್ಟು ಸಹಕಾರ ಸಂಘಗಳು ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಉಳ್ಳವರಿಂದ ಹಣ ಪಡೆದು, ಇಲ್ಲದವರಿಗೆ ಸಾಲ ನೀಡುವ ಕೆಲಸವನ್ನು ಈ ಸಂಘಗಳು ಮಾಡುತ್ತಿವೆ. ಸಂಘಕ್ಕೆ ಇಟ್ಟಿರುವ ವಿಕಾಸ ಹೆಸರು ಉತ್ತಮವಾಗಿದೆ. ನೂರಾರು ವರ್ಷಗಳ ಕಾಲ ಈ ಸಂಘ ಗ್ರಾಹಕರ ಸೇವೆ ಮಾಡಬೇಕಾದರೆ, ಬ್ಯಾಂಕ್‌ನ ಆಡಳಿತ ಮಂಡಳಿಯವರು ಒಗ್ಗಟ್ಟಿನ ಮನೋಭಾವದಿಂದ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ, ಈ ಸಂಘದ ಪ್ರಗತಿಗೆ ಶುಭ ಆರೈಸಿದರು.

ವಿಕಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಉಪಾಧ್ಯಕ್ಷ ಎಚ್‌.ಎಂ. ಹರ್ಷ, ನಿರ್ದೇಶಕರಾದ ಮಂಜುನಾಥ್‌, ಗೂಳಿಹಟ್ಟಿ ಕೃಷ್ಣಮೂರ್ತಿ, ಡಿ.ಟಿ. ವಟ್ಟಿ ಲಕ್ಷ್ಮಣ್‌, ಬಾಲರಾಜು, ವಕೀಲ ಎಚ್‌.ಬಿ. ರವಿಕುಮಾರ್‌, ಪಾರ್ವತಮ್ಮ, ಮುರುಳಿ ಹಾಗೂ ಬ್ಯಾಂಕ್‌ ಸಿಬ್ಬಂದಿ ಹಾಜರಿದ್ದರು.

*
300 ಮಂದಿ ಷೇರುದಾರರಿಂದ ₹4 ಲಕ್ಷ ಠೇವಣಿ ಸಂಗ್ರಹಿಸಿ, ಬ್ಯಾಂಕ್‌ ಪ್ರಾರಂಭಿಸಿದ್ದೇವೆ. ಗುರುಗಳ ಮಾರ್ಗದರ್ಶನದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತೇವೆ.
-ಎಸ್‌. ಲಿಂಗಮೂರ್ತಿ, ವಿಕಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.