ಹಿರಿಯೂರು: ವಿಕಸಿತ ಭಾರತ ಸಂಕಲ್ಪ ಯಾತ್ರೆ ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗ್ಯಾರಂಟಿ ಯೋಜನೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎ.ಎಲ್.ಪ್ರದೀಪ್ ಹೇಳಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ಈಗಾಗಲೇ ಕಿಸಾನ್ ಸಮ್ಮಾನ್, ಜಲಜೀವನ್ ಮಿಷನ್ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ತಳಮಟ್ಟದ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ. ಬಡವರು ತಾವು ನೆಲೆಸಿರುವ ಸ್ಥಳದಲ್ಲಿಯೇ ಸಣ್ಣ ಉದ್ಯಮ ನಡೆಸಲು ಬೇಕಿರುವ ಕುಶಲ ತರಬೇತಿ ಜೊತೆಗೆ ಆರ್ಥಿಕ ನೆರವು ನೀಡಲಾಗುತ್ತದೆ’ ಎಂದು ಹೇಳಿದರು.
‘ಇದಲ್ಲದೆ ಬ್ಯಾಂಕ್ನಲ್ಲಿ ವ್ಯವಹಾರ ನಡೆಸುವಾಗ ವಹಿಸಬೇಕಿರುವ ಎಚ್ಚರ, ಆನ್ಲೈನ್ ಬ್ಯಾಂಕಿಂಗ್ನಲ್ಲಿ ನಡೆಯುತ್ತಿರುವ ವಂಚನೆ. ವಿವಿಧ ಯೋಜನೆಗಳಿಗೆ ದೊರೆಯುವ ಸಾಲ ಮತ್ತು ಸಾಲಕ್ಕೆ ವಿಧಿಸುವ ಬಡ್ಡಿ, ಸಾಲ ಮರುಪಾವತಿ ಬಗ್ಗೆ ಗ್ರಾಹಕರು ತಿಳಿಯಬೇಕಿದೆ. ವಿಶೇಷವಾಗಿ ಮಹಿಳೆಯರು ಆರ್ಥಿಕ ಸಾಕ್ಷರರಾದಲ್ಲಿ ಉನ್ನತಮಟ್ಟಕ್ಕೆ ಏರಬಹುದು’ ಎಂದು ತಿಳಿಸಿದರು.
ಸಂಕಲ್ಪ ಯಾತ್ರೆಯಲ್ಲಿ ಕೆನರಾ ಬ್ಯಾಂಕ್ ಉಪ ಮುಖ್ಯ ವ್ಯವಸ್ಥಾಪಕರಾದ ವಂದನಾ, ಪ್ರವಾಸಿ ಮಂದಿರ ವೃತ್ತದ ಶಾಖೆಯ ಹಿರಿಯ ವ್ಯವಸ್ಥಾಪಕ ಸನೇಶ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾ ಅವರನ್ನು ಸನ್ಮಾನಿಸಲಾಯಿತು. ಸ್ವಸಹಾಯ ಸಂಘಗಳ ಸದಸ್ಯರು, ಬ್ಯಾಂಕ್ಗಳ ಗ್ರಾಹಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.