ADVERTISEMENT

ನಾಯಕನಹಟ್ಟಿ: ಶ್ರಮರಹಿತ ಸಂಪಾದನೆಯತ್ತ ಹೆಚ್ಚಿದ ಒಲವು

ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:07 IST
Last Updated 13 ಆಗಸ್ಟ್ 2021, 4:07 IST
ನಾಯಕನಹಟ್ಟಿಯ ವಿದ್ಯಾವಿಕಾಸ ಶಾಲೆಯಲ್ಲಿ ಗುರುವಾರ ಶ್ರಾವಣ ಮಾಸದ ನಿಮಿತ್ತ ನಡೆದ ‘ಮನೆ-–ಮನೆಗೆ ಮಾಚಿದೇವ’ ಕಾರ್ಯಕ್ರಮದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿದರು
ನಾಯಕನಹಟ್ಟಿಯ ವಿದ್ಯಾವಿಕಾಸ ಶಾಲೆಯಲ್ಲಿ ಗುರುವಾರ ಶ್ರಾವಣ ಮಾಸದ ನಿಮಿತ್ತ ನಡೆದ ‘ಮನೆ-–ಮನೆಗೆ ಮಾಚಿದೇವ’ ಕಾರ್ಯಕ್ರಮದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿದರು   

ನಾಯಕನಹಟ್ಟಿ: ಇಂದು ಸಮಾಜದಲ್ಲಿ ಶ್ರದ್ಧೆ, ಕಾಯಕ ನಿಷ್ಠೆ, ಪರಿಶ್ರಮದ ಸಂಪಾದನೆಗೆ ಬದಲಾಗಿ ಶ್ರಮರಹಿತ ಸಂಪಾದನೆಗೆ ಜನರ ಒಲವು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಶ್ರಮ ಸಂಸ್ಕೃತಿಯ ಪರಂಪರೆ ಕಣ್ಮರೆಯಾಗುತ್ತದೆ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾವಿಕಾಸ ಶಾಲೆಯಲ್ಲಿ ಗುರುವಾರ ಶ್ರಾವಣ ಮಾಸದ ನಿಮಿತ್ತ ಚಿತ್ರದುರ್ಗದ ಮಡಿವಾಳ ಗುರಪೀಠವು ಹಮ್ಮಿಕೊಂಡಿದ್ದ ‘ಮನೆ-ಮನೆಗೆ ಮಾಚಿದೇವ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಜಾತಿ, ಧರ್ಮ, ಮೇಲುಕೀಳು, ಲಿಂಗತಾರತಮ್ಯವಿಲ್ಲದೆ ಇಡೀ ಮಾನವ ಜನಾಂಗಕ್ಕೆ ಶರಣರು, ದಾರ್ಶನಿಕರು, ಸಾಧು–ಸಂತರು ಸಮಾನತೆ, ಭಕ್ತಿ, ಶ್ರಮ ಸಂಸ್ಕೃತಿ, ಆದರ್ಶಗಳನ್ನು ಸಾರಿ ಹೇಳಿದರು. ಇಂತಹ ಶ್ರೇಷ್ಠ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಂದು ಶ್ರಮವಿಲ್ಲದಜೀವನ ಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಶ್ರಮರಹಿತ ಸಂಪಾದನೆಗೆ ಒಲವು ತೋರುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಶ್ರಮ ಸಂಸ್ಕೃತಿಯ ಪರಂಪರೆ ನಶಿಸಿ ಹೋಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಮಡಿವಾಳ ಸಮುದಾಯ ರಾಜಕೀಯವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢವಾಗಬೇಕಿದೆ. ಪ್ರಸ್ತುತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮುದಾಯಕ್ಕೆ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಗುರುಪೀಠವು ಶ್ರಾವಣಮಾಸದಲ್ಲಿ ‘ಮನೆ-ಮನೆಗೆ ಮಾಚಿದೇವ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದರು.

ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಗುರುಪೀಠದ ಆವರಣದಲ್ಲಿ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮೇಳ, ಮಹಿಳಾ ಸಬಲೀಕರಣಕ್ಕಾಗಿ ಆರ್ಥಿಕ ಪುನಶ್ಚೇತನ ತರಬೇತಿ ಸೇರಿತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಕ್ಕೆ ಸಹಕಾರ ಅಗತ್ಯ ಎಂದು ಹೇಳಿದರು.

ಉಪನ್ಯಾಸಕ ಡಾ.ಬಸವರಾಜ್ ಹಾಗೂ ಎಂ.ಜಿ. ರುದ್ರಮುನಿ ಮಡಿವಾಳ ಮಾಚಿದೇವರ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಜಿಲ್ಲಾಧ್ಯಕ್ಷ ರಾಮಜ್ಜ, ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಖಜಾಂಚಿ ನಾಗರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ, ನಾಯಕನಹಟ್ಟಿ ಸಮುದಾಯದ ಅಧ್ಯಕ್ಷ ಬಿ. ರುದ್ರಮುನಿ, ಗೌರವಾಧ್ಯಕ್ಷ ಎಂ. ತಿಪ್ಪೇಸ್ವಾಮಿ, ಆರ್. ಮುನಿಯಪ್ಪ, ಉಮೇಶ್, ಟಿ.ರುದ್ರಮುನಿ, ರುದ್ರಯ್ಯ, ಪಂಚಾಕ್ಷರಿಸ್ವಾಮಿ, ದಳವಾಯಿ ರುದ್ರಮುನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.