ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊನ್ನೇನಹಳ್ಳಿ ಆಂಜನೇಯಸ್ವಾಮಿ ಹಾಗೂ ದೇವಪುರದ ಕೆರೆಯಾಗಳಮ್ಮ ದೇವಿಯ ಆರತಿ ಬಾನೋತ್ಸವ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಭ್ರಮದಿಂದ ನೆರವೇರಿತು.
ಆರತಿ ಬಾನೋತ್ಸವದ ಅಂಗವಾಗಿ ದೇಗುಲವನ್ನು ವಿದ್ಯುತ್ ದೀಪ, ತಳಿರು ತೋರಣ, ಬಣ್ಣ, ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ಶನಿವಾರ ಬೆಳಿಗ್ಗೆಯಿಂದಲೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಪ್ರತಿ ವರ್ಷದಂತೆ ಗ್ರಾಮದ ಯುವತಿಯರು ನವಣಕ್ಕಿ ಆರತಿ ಸೇವೆ ಮಾಡುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು. ಮುಂಜಾನೆ 4ಕ್ಕೆ ಆರಂಭವಾದ ನವಣಕ್ಕಿ ಆರತಿ ಬಾನೋತ್ಸವದ ಮೆರವಣಿಗೆ ಬೆಳಿಗ್ಗೆ 9ರ ವರಗೆ ಗ್ರಾಮದ ರಾಜಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ನೂರಾರು ಯುವತಿಯರು ನವಣಕ್ಕಿಯ ಆರತಿಯನ್ನು ತಲೆ ಮೇಲೆ ಹೊತ್ತು ಬರಿಗಾಲಲ್ಲಿ 3 ತಾಸಿಗೂ ಅಧಿಕ ಸಮಯ ಮೆರವಣಿಗೆಯಲ್ಲಿ ಸಾಗಿ ಭಕ್ತಿ ಸಮರ್ಪಿಸಿದರು.
ಆರತಿ ಬಾನೋತ್ಸವವನ್ನು ಪ್ರತಿ ವರ್ಷ ಮಾಡುವುದರಿಂದ ಸಕಾಲಕ್ಕೆ ಮಳೆ–ಬೆಳೆ ಆಗುತ್ತದೆ. ಜನರು ಹಾಗೂ ಜಾನುವಾರುಗಳಿಗೆ ರೋಗ ಬರುವುದಿಲ್ಲ. ಇಷ್ಟಾರ್ಥಗಳು ಈಡೇರುತ್ತವೆ. ಆರತಿ ಬಾನ ಮುಗಿಸಿ ದೇವಿ ರಥೋತ್ಸವ ಏರಿದಾಗ, ಶೂನ್ಯ ಮಾಸ ಕಳೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ದೇವಿಯ ತವರು ಹೊನ್ನೇನಹಳ್ಳಿಯಲ್ಲಿ ಆರತಿ ಬಾನೋತ್ಸವ ಆರಂಭವಾದ ನಂತರ ನಾಗತಿಹಳ್ಳಿ, ಕೋಡಿಹಳ್ಳಿ, ನರಸೀಪುರ, ಮಸಣಿಹಳ್ಳಿ, ಕೋಡಿಹಳ್ಳಿ, ನರಸೀಪುರ ಗ್ರಾಮಗಳಲ್ಲಿ ಪ್ರತಿ ವರ್ಷದಂತೆ 12 ದಿನಗಳ ಕಾಲ ಆರತಿ ಬಾನೋತ್ಸವ ನಡೆಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.