ಚಿತ್ರದುರ್ಗ: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್ನಿಂದಾಗಿ ಮೃತಪಟ್ಟಲ್ಲಿ ಆ ಕುಟುಂಬಕ್ಕೆ ಸರ್ಕಾರ ₹ 1 ಲಕ್ಷ ಆರ್ಥಿಕ ನೆರವು ಘೋಷಿಸಿದೆ. ಇದರ ಪರಿಹಾರ ನೀಡಲಿಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ತಮ್ಮ ವ್ಯಾಪ್ತಿಯ ತಾಲ್ಲೂಕು ಕಚೇರಿ ಸಂಪರ್ಕಿಸಿ ಅರ್ಜಿ ಪಡೆದು ಮಾಹಿತಿ, ಸ್ವಯಂ ಘೋಷಣಾ ಹಾಗೂ ನಿರಾಕ್ಷೇಪಣಾ ಪತ್ರ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ಕಚೇರಿಗೆ ಸಲ್ಲಿಸಬೇಕು.
ದಾಖಲಾತಿಗಳು: ಸರ್ಕಾರದ ನಿಗದಿತ ಅರ್ಜಿಯಲ್ಲೇ ದಾಖಲೆ ಸಲ್ಲಿಸಬೇಕು. ಕೋವಿಡ್ನಿಂದ
ಮೃತಪಟ್ಟಿದಕ್ಕೆ ಅಧಿಕೃತವಾಗಿ ಗುರುತಿಸಿದ ಪ್ರಯೋಗಾಲಯದಿಂದ ಪಡೆದ ಪಾಸಿಟಿವ್ ವರದಿ, ಕೋವಿಡ್ ದೃಢಪಟ್ಟ ರೋಗಿಯ ಸಂಖ್ಯೆಯನ್ನು ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸಿ ಸಲ್ಲಿಸಬೇಕು.
ಆರ್ಟಿಪಿಸಿಆರ್ ನೆಗೆಟಿವ್ ವರದಿ ಇರುವ ಶಂಕಿತ ಪ್ರಕರಣಗಳಲ್ಲಿ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು ಪ್ರಯೋಗಾಲಯದ ವರದಿಗಳ ಜತೆಗೆ ರೋಗಿಯ ಸಂಖ್ಯೆ ಸಮೇತ ಅರ್ಜಿ ಸಲ್ಲಿಸಬಹುದು. ವೈದ್ಯಾಧಿಕಾರಿಗಳು, ಡಿಎಚ್ಒ ಮತ್ತು ಟಿಎಚ್ಒ ದೃಢೀಕರಿಸಿರುವುದು ಕಡ್ಡಾಯ.
ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ, ಅರ್ಜಿದಾರರ ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಪಡೆಯಲು ಮತ್ತು ಸಲ್ಲಿಸಲು ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ತಾಲ್ಲೂಕು ಕಚೇರಿ, ನಾಡ ಕಚೇರಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.