ADVERTISEMENT

ಹೊಳಲ್ಕೆರೆ: ‘ಶಿಕ್ಷಣಕ್ಕೆ ಮಲ್ಲಿಕಾರ್ಜುನ ಸ್ವಾಮೀಜಿ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:19 IST
Last Updated 9 ಆಗಸ್ಟ್ 2021, 3:19 IST
ಹೊಳಲ್ಕೆರೆಯಲ್ಲಿ ಭಾನುವಾರ ನಡೆದ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು
ಹೊಳಲ್ಕೆರೆಯಲ್ಲಿ ಭಾನುವಾರ ನಡೆದ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು   

ಹೊಳಲ್ಕೆರೆ: ಶಿಕ್ಷಣ ಕ್ಷೇತ್ರಕ್ಕೆ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಯ ಕೊಡುಗೆ ಅಪಾರ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪಟ್ಟಣದ ಒಂಟಿಕಂಬದ ಮಠದಲ್ಲಿ ಭಾನುವಾರ ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಶ್ರೀಗಳು ಬಡತನದಿಂದ ಬಂದರೂ ಸಾಂಸ್ಕೃತಿಕ ಶ್ರೀಮಂತಿಕೆ ಅವರಲ್ಲಿತ್ತು. ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಜಯದೇವ ಮುರುಘ ರಾಜೇಂದ್ರ ಶ್ರೀಗಳು ಮತ್ತು ಜಯವಿಭವ ಶ್ರೀಗಳ ಆಶೀರ್ವಾದ ಅವರಿಗಿತ್ತು. ಅವರು ನೇರನುಡಿಗೆ ಹೆಸರಾಗಿದ್ದರು. ಅವರಿಗೆ ಅಧ್ಯಾತ್ಮ ಮತ್ತು ಅಭಿವೃದ್ಧಿಯ ದೂರದೃಷ್ಟಿ ಇತ್ತು. ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಮುರುಘಾ ಮಠಕ್ಕೆ ಆರ್ಥಿಕ ಭದ್ರತೆಯನ್ನು ತಂದುಕೊಟ್ಟರು. ಸಮಾಜದ ಒಳತಿಗಾಗಿ ಮಠಾಧೀಶರು ಇರುತ್ತಾರೆ ಎಂಬುದಕ್ಕೆ ಅವರು ಉತ್ತಮ ಉದಾಹರಣೆ ಎಂದುಸ್ಮರಿಸಿದರು.

ADVERTISEMENT

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ‘ನಾವು ಬಸವಣ್ಣನವರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು. ಬಸವಾದಿ ಶರಣರ ತತ್ವಗಳು ಈಗಿನ ಕಾಲಕ್ಕೆ ಅತಿಮುಖ್ಯ. ಅವು ದೂರವಾದರೆ ನಾವು ದಾರಿ ತಪ್ಪಬಹುದು. ಆದರೆ, ಇಂದು ಜನ ಅವರ ತತ್ವಗಳನ್ನು ಆಚರಿಸದೆ ಇರುವುದು ದುರಂತ. ಮಲ್ಲಿಕಾರ್ಜುನ ಜಗದ್ಗುರುಗಳು ದಲಿತರನ್ನು, ಶೋಷಿತರನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು’ ಎಂದು ಸ್ಮರಿಸಿದರು.

ಗಿಲಿಕೇನಹಳ್ಳಿಯ ಎನ್.ಟಿ.ನಾಗಪ್ಪ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮೀಜಿ, ಮಠದಕುರುಬರಹಟ್ಟಿ ಆನಂದಪ್ಪ, ಎಸ್ ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸದಸ್ಯರಾದ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ಮುರುಗೇಶ್, ಮೋಹನ್ ಇದ್ದರು.

ಶಿವಬಸವ ಸ್ವಾಮೀಜಿ ಸ್ವಾಗತಿಸಿದರು. ಬಸವಕುಮಾರ ಸ್ವಾಮೀಜಿ ನಿರೂಪಿಸಿದರು. ಎಲ್.ಬಿ. ರಾಜಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.