ADVERTISEMENT

ಚಿತ್ರದುರ್ಗ: ಮದ್ಯವರ್ಜನ ಕೇಂದ್ರದ ಮೇಲೆ ಕಣ್ಗಾವಲು

ಅನುದಾನ ಸೋರಿಕೆ ತಡೆಗೆ ಸರ್ಕಾರದ ಕ್ರಮ; ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 14:35 IST
Last Updated 17 ಸೆಪ್ಟೆಂಬರ್ 2021, 14:35 IST
ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಸಮೀಪದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಎ.ನಾರಾಯಣಸ್ವಾಮಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಸಮೀಪದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಎ.ನಾರಾಯಣಸ್ವಾಮಿ ಪರಿಶೀಲನೆ ನಡೆಸಿದರು.   

ಚಿತ್ರದುರ್ಗ: ಮದ್ಯವರ್ಜನ ಕೇಂದ್ರಗಳಿಗೆ ಸರ್ಕಾರ ನೀಡುವ ಅನುದಾನ ಸೋರಿಕೆ ಆಗುವುದನ್ನು ತಡೆಯುವ ಉದ್ದೇಶದಿಂದ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಪ್ರತಿಯೊಂದು ಮಾಹಿತಿ, ಚಲನವಲನ ಅಂತರ್ಜಾಲದಲ್ಲಿ ಲಭ್ಯವಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಗೋನೂರು ರಸ್ತೆಯಲ್ಲಿರುವ ‘ಡೇಟ್ಸ್‌ ಸಂಸ್ಥೆ’ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮದ್ಯವರ್ಜನ ಕೇಂದ್ರಕ್ಕೆ ದಾಖಲಾದವರ ಬಳಿ ಚರ್ಚಿಸಿದರು. ಹಾಜರಾತಿ ಪುಸ್ತಕ, ವೈದ್ಯಕೀಯ ಚಿಕಿತ್ಸೆಯ ಮಾಹಿತಿ ಪಡೆದರು. ಸಾರ್ವಜನಿಕರ ಅರಿವಿಗೆ ಬರುವಂತೆ ನಾಮಫಲಕ ಅಳವಡಿಸುವಂತೆ ಸೂಚಿಸಿದರು.

‘ಮದ್ಯವರ್ಜನ ಕೇಂದ್ರ ಹಾಗೂ ವೃದ್ಧಾಶ್ರಮಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. 15 ಜನ ಇರುವ ಕೇಂದ್ರಕ್ಕೆ ₹ 24 ಲಕ್ಷದವರೆಗೆ ಸಹಾಯಧನ ಕೊಡುತ್ತೇವೆ. ಈ ಅನುದಾನ ಏನಾಗುತ್ತದೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನ ಇವೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಸರಿಯಾಗಿ ಗಮನ ಹರಿಸುವುದಿಲ್ಲ. ಜಿಲ್ಲಾಧಿಕಾರಿ ಪರಿಶೀಲನೆ ಮಾಡುವಂತೆ ಹಾಗೂ ರಾಜ್ಯ ಸರ್ಕಾರವೂ ಗಮನ ಹರಿಸುವಂತೆ ಆದೇಶ ಹೊರಬೀಳಲಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರದಲ್ಲಿ ಯಾರಿಗೆ ಚಿಕಿತ್ಸೆ ಸಿಗುತ್ತಿದೆ, ಯಾವ ವ್ಯಕ್ತಿಗೆ ಆಶ್ರಯ ನೀಡಲಾಗಿದೆ ಎಂಬುದನ್ನು ಅರಿಯಲು ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ತಿಂಗಳಿಂದ ಈಚೆಗೆ ನಿಗಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಮಾಹಿತಿ ಪಡೆಯಲು ಸಾಧ್ಯವಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅಂತರ್ಜಾಲಕ್ಕೆ ಲಿಂಕ್‌ ಮಾಡಲಾಗಿದೆ. ಸರ್ಕಾರೇತರ ಸೇವಾ ಸಂಸ್ಥೆಗಳನ್ನು (ಎನ್‌ಜಿಒ) ಸರಿದಾರಿಗೆ ತರುವ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಇಂತಹ ಕೇಂದ್ರಗಳಲ್ಲಿ ಕೇವಲ ಮದ್ಯ ವ್ಯಸನ ಮಾತ್ರ ಬಿಡಿಸುವುದಿಲ್ಲ. ಎಲ್ಲ ರೀತಿಯ ಮಾದಕ ವಸ್ತುಗಳ ವ್ಯಸನಿಗಳಿಗೂ ಇಲ್ಲಿ ಚಿಕಿತ್ಸೆ ಸಿಗುತ್ತದೆ. ನೆರೆ–ಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶದಿಂದ ಮಾದಕ ವಸ್ತು ಭಾರತಕ್ಕೆ ಕಳ್ಳ ಮಾರ್ಗದಲ್ಲಿ ಸರಬರಾಜು ಆಗುತ್ತಿದೆ. ಡ್ರಗ್ಸ್‌ ಮೂಲಕ ದೇಶದ ಆರ್ಥಿಕತೆ ಹದಗೆಡಿಸುವ ಹುನ್ನಾರ ನಡೆಯುತ್ತಿದೆ. ಪೊಲೀಸರು ಇಂತಹ ಮಾದಕ ವಸ್ತು ಸರಬರಾಜು ಮೇಲೆ ಹೆಚ್ಚು ನಿಗಾ ಇಡಬೇಕು’ ಎಂದು ಸೂಚಿಸಿದರು.

ಏನಜ್ಜಿ ಚೆನ್ನಾಗಿದ್ದೀಯಾ..?’

‘ಏನಜ್ಜಿ ಚೆನ್ನಾಗಿದ್ದೀಯಾ.. ಊಟ ಸರಿಯಾಗಿ ಹಾಕ್ತಾರಾ..’ ನಿರಾಶ್ರಿತರ ಕೇಂದ್ರದಲ್ಲಿರುವ ವೃದ್ದೆಯೊಂದಿಗೆ ಸಚಿವರು ಹೀಗೆ ಆಪ್ತವಾಗಿ ಮಾತುಕತೆ ನಡೆಸಿದರು.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಸಮೀಪದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ನಿರಾಶ್ರಿತರೊಂದಿಗೆ ಚರ್ಚಿಸಿದರು. ಊರು, ಕುಟುಂಬದ ಹಿನ್ನೆಲೆ, ಮನೆಗೆ ತೆರಳುವ ಇಚ್ಛೆಯ ಬಗ್ಗೆ ಅಭಿಪ್ರಾಯ ಪಡೆದರು. ಇಲ್ಲಿ 220 ಪುರುಷರು ಹಾಗೂ 64 ಮಹಿಳೆಯರು ಆಶ್ರಯ ಪಡೆದಿದ್ದಾರೆ.

‘ಕೆಲ ವೃದ್ಧರಿಗೆ ಮನೆಗೆ ತೆರಳಲು ಆಸಕ್ತಿ ಇರುವುದಿಲ್ಲ. ಮಕ್ಕಳು ಸರಿಯಾಗಿ ನೋಡಿಕೊಳ್ಳುವ ಭರವಸೆ ಕಳೆದುಕೊಂಡಿದ್ದಾರೆ. ಪೋಷಕರನ್ನು ಸರಿಯಾಗಿ ಆರೈಕೆ ಮಾಡದವರಿಗೆ ತಹಶೀಲ್ದಾರ್‌ ಮೂಲಕ ನೋಟಿಸ್‌ ಜಾರಿ ಮಾಡಿ’ ಎಂದು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಎಂ.ಮಹದೇವಯ್ಯ ಅವರಿಗೆ ಸೂಚಿಸಿದರು.

***

ಚಿತ್ರದುರ್ಗ ಜಿಲ್ಲೆಯ ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವೆ. ಆಸ್ಪತ್ರೆಯ ಹಾಸಿಗೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ವಿಸ್ತರಿಸುವಂತೆ ಸೂಚನೆ ನೀಡುವೆ.

-.ನಾರಾಯಣಸ್ವಾಮಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.