ADVERTISEMENT

ನರೇಗಾ, ಜಲಜೀವನ್ ಯೋಜನೆಗಳ ವ್ಯಾಪರೀಕರಣ ಸಲ್ಲದು- ಎನ್.ವೈ.ಗೋಪಾಲಕೃಷ್ಣ

ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 13:35 IST
Last Updated 5 ಜೂನ್ 2023, 13:35 IST
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು, ಈಚೆಗೆ ಸಿಡಿಲುಬಡಿದು ಮೃತಪಟ್ಟಿದ್ದ ಹೋಬಳಿಯ ಜೋಗಿಹಟ್ಟಿ ಗ್ರಾಮದ ದೊರೆಗಾನ ಗೊಂದಯ್ಯ ಅವರ ಕುಟುಂಬಕ್ಕೆ ₹5 ಲಕ್ಷದ ಪರಿಹಾರದ ಚೆಕ್ ವಿತರಿಸಿದರು. ತಹಶೀಲ್ದಾರ್ ರೆಹಾನ್ ಪಾಷ, ಇಓ ಹೊನ್ನಯ್ಯ ಇದ್ದರು
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು, ಈಚೆಗೆ ಸಿಡಿಲುಬಡಿದು ಮೃತಪಟ್ಟಿದ್ದ ಹೋಬಳಿಯ ಜೋಗಿಹಟ್ಟಿ ಗ್ರಾಮದ ದೊರೆಗಾನ ಗೊಂದಯ್ಯ ಅವರ ಕುಟುಂಬಕ್ಕೆ ₹5 ಲಕ್ಷದ ಪರಿಹಾರದ ಚೆಕ್ ವಿತರಿಸಿದರು. ತಹಶೀಲ್ದಾರ್ ರೆಹಾನ್ ಪಾಷ, ಇಓ ಹೊನ್ನಯ್ಯ ಇದ್ದರು   

ಚಳ್ಳಕೆರೆ: ಗ್ರಾಮೀಣಾಭಿವೃದ್ಧಿಯ ಎರಡು ಕಣ್ಣುಗಳು ಎನಿಸಿರುವ ನರೇಗಾ ಮತ್ತು ಜಲಜೀವನ್ ಮಿಷನ್ ಯೋಜನೆಗಳು ವ್ಯಾಪಾರೀಕರಣವಾಗುತ್ತಿವೆ ಎಂದು ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಆತಂಕ ವ್ಯಕ್ತಪಡಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀನಾ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಯಾವ ಸಮಸ್ಯೆಗಳೂ ಇರುವುದಿಲ್ಲ. ಆದರೆ ಅವು ಬರೀ ಹೂಳೆತ್ತುವ ಕಾಮಗಾರಿಯಲ್ಲಿ ಮುಳುಗಿರುತ್ತವೆ. ಕೂಲಿ ಕಾರ್ಮಿಕರ ಪೋಟೊ ತೆಗೆಸಿದ ಅರ್ಧಗಂಟೆಯ ನಂತರ ಅವರನ್ನು ಮನೆಗೆ ಕಳುಹಿಸಿ, ಆಮೇಲೆ ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸಿ ಬೋಗಸ್ ಬಿಲ್ ಮಾಡಿಕೊಳ್ಳುವ ಕೆಟ್ಟ ಅಭ್ಯಾಸ ಬೆಳೆದಿದೆ ಎಂದರು.

ಯಾವುದೇ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿಸಿಕೊಳ್ಳುವ ಪ್ರಕರಣಗಳು ಕಂಡುಬಂದರೆ ಅಂಥವರ ವಿರುದ್ಧ ಕೂಡಲೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನರೇಗಾ ಯೋಜನೆಯಡಿಯಲ್ಲಿ ಶಾಲಾ ಕಟ್ಟಡ, ಅಂಗನವಾಡಿ, ರಸ್ತೆ, ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕೆಲಸ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಐದು ವರ್ಷ ಕಳೆದರೂ ಜಲಜೀವನ್ ಮಿಷನ್ ಯೋಜನೆಯ ಪೈಪ್‍ಲೈನ್ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ. ಯೋಜನೆಯ ನೆಪದಲ್ಲಿ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲೆ ಗುಂಡಿ ತೆಗೆದಿರುವುದಲ್ಲದೆ ಗುಣಮಟ್ಟದ ರಸ್ತೆಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ವೃದ್ಧರು, ಮಕ್ಕಳು ಎಡವಿ ಬಿದ್ದು ಮೂಳೆ ಮುರಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕುಡಿಯುವ ನೀರು ಒದಗಿಸಿಲ್ಲ. ತೆಗೆದ ಗುಂಡಿ ಹಾಗೂ ಅಗೆದ ರಸ್ತೆಗಳನ್ನೂ ದುರಸ್ತಿ ಮಾಡಿಲ್ಲ. ರಸ್ತೆ ದುರಸ್ತಿ ಹಾಗೂ ಗುಂಡಿ ಮುಚ್ಚಿಸುವ ಕೆಲಸ ನಾಳೆಯೇ ಆಬೇಕು ಎಂದು ಎಂಜಿನಿಯರ್‌ಗೆ ಅವರು ತಾಕೀತು ಮಾಡಿದರು.

128 ಶಾಲಾ ಕೊಠಡಿಗಳ ಕೊರತೆಯಿದೆ. ಗಡಿ ಭಾಗದಲ್ಲಿ ಶಿಕ್ಷಕರಿಲ್ಲದ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಇಒ ಕೆ.ಎಸ್. ಸುರೇಶ್ ಅವರು ಸಭೆಯ ಗಮನಕ್ಕೆ ತಂದರು. ಯಾರ ಒತ್ತಡಕ್ಕೂ ಮಣಿಯದೆ ವಿಷಯವಾರು ಪಠ್ಯ ಬೋಧಿಸುವ ಉತ್ತಮ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಶಾಸಕರು ಸಲಹೆ ನೀಡಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾನಂದಸ್ವಾಮಿ, ಇಒ ಹೊನ್ನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.