ಚಿತ್ರದುರ್ಗ: ‘ನವಜಾತ ಶಿಶು ಜನನ ದಿನದಿಂದ ಸಾವಿರ ದಿನಗಳವರೆಗೆ ಮಗುವಿನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಬಗ್ಗೆ ನಿಗಾ ವಹಿಸುವ ಅವಶ್ಯಕತೆ ಇದೆ. ಈ ಕುರಿತು ಅಧ್ಯಯನ ನಡೆಸಲು ‘ಸ್ಪರ್ಶ್; ದಿ ಫಸ್ಟ್ 1000 ಡೇಸ್ ಆಫ್ ಲೈಫ್’ ಸಂಶೋಧನಾ ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೆರಿಗೆ ವಿಭಾಗದ ಮುಖ್ಯಸ್ಥೆ ಡಾ.ಅಶೂ ಗ್ರೋವರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ (ಕೆಎಚ್ಪಿಟಿ) ವತಿಯಿಂದ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಗುವಿನ ಜನನದಿಂದ ಸಾವಿರ ದಿನಗಳವರೆಗೆ ಉತ್ತಮ ಆರೋಗ್ಯ ವೃದ್ಧಿಸಲು ಹಲವು ರೀತಿಯ ಆರೋಗ್ಯ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ 5 ತಿಂಗಳಿಂದಲೂ ಜಿಲ್ಲೆಯ ಮಕ್ಕಳ ಆರೋಗ್ಯ ಸ್ಥಿತಿ ಅಧ್ಯಯನ ಮಾಡಲಾಗುತ್ತಿದೆ. ಯೋಜನೆಯ ಅನುಷ್ಠಾನಕ್ಕೆ ರಾಜ್ಯಮಟ್ಟದ ಹಾಗೂ ಸ್ಥಳೀಯ ಆರೋಗ್ಯ ಸಂಸ್ಥೆಗಳ ಜೊತೆ ಕೈ ಜೋಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆಯುವ ಫಲಿತಾಂಶ ದೇಶದಾದ್ಯಂತ ಮಾರ್ಗದರ್ಶಿಯಾಗಲಿದೆ’ ಎಂದು ಹೇಳಿದರು.
‘ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳು ಉತ್ತಮ ಸೌಲಭ್ಯಗಳನ್ನು ಜನರಿಗೆ ನೀಡುತ್ತಿವೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಯೋಜನೆಯನ್ನು ರೂಪಿಸಿ, ಸುಮ್ಮನೆ ಕುಳಿತರೆ ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಆಸ್ಪತ್ರೆಗಳು ವಾಸ್ತವಿಕವಾಗಿ ಎದುರಿಸುತ್ತಿರುವ ತೊಂದರೆ ಹಾಗೂ ಸವಾಲುಗಳ ಕುರಿತು ಮಾಹಿತಿ ನೀಡಬೇಕು. ಇದರಿಂದ ಅಗತ್ಯ ಯಂತ್ರೋಪಕರಣ, ಔಷಧೋಪಚಾರ, ಸವಲತ್ತುಗಳನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಸಹಜ ಹೆರಿಗೆ, ಅವಧಿಗೆ ಮುನ್ನ ಹೆರಿಗೆ, ಕಡಿಮೆ ತೂಕದ ಮಕ್ಕಳ ಜನನವಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮಾದರಿ ಅಧ್ಯಯನಲ್ಲಿ ಕಂಡುಬರುವ ಅಂಶಗಳನ್ನು ಪರಿಗಣಿಸಿ ಹೆಚ್ಚು ಪರಿಣಾಮ ಬೀರುವ ಕಾರ್ಯತಂತ್ರಗಳನ್ನು ಐಸಿಎಂಆರ್ ರೂಪಿಸಲಿದೆ. ಇದು ದೇಶದ ಬೇರೆ ಜಿಲ್ಲೆ ಹಾಗೂ ಭಾಗಗಳ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಸಹಾಯಕವಾಗಲಿದೆ’ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ‘ಸ್ಪರ್ಶ್– ದಿ ಫಸ್ಟ್ 1000 ಡೇಸ್ ಆಫ್ ಲೈಫ್’ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಈ ಅವಧಿಯಲ್ಲಾದ ಉತ್ತಮ ಕಾರ್ಯಗಳು ಹಾಗೂ ಎದುರಿಸಿದ ಅಡಚಣೆಗಳ ಬಗ್ಗೆ ಅವಲೋಕನ ನಡೆಸಲು ಕಾರ್ಯಾಗಾರ ನೆರವಾಗಲಿದೆ. ಇದರಿಂದ ಮುಂದಿನ ದಿನಗಳಿಗೆ ಹೇಗೆ ಕಾರ್ಯತಂತ್ರಗಳನ್ನು ರೂಪಿಸಬಹುದು ಎಂಬುದನ್ನು ತಿಳಿಯಬಹುದಾಗಿದೆ’ ಎಂದರು.
‘ಯೋಜನೆಯಡಿ ಕಡಿಮೆ ತೂಕದೊಂದಿಗೆ ಜನಿಸಿದ ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸುವಂತೆ ಮಾಡಲಾಗಿದೆ. ಮಗುವಿನ ಬೆಳವಣಿಗೆಯ ಪ್ರತಿ ಹಂತದ ಮೇಲೂ ನಿಗಾ ವಹಿಸಲು ಈ ಅಧ್ಯಯನ ಕೈಗೊಳ್ಳಲಾಗಿದೆ’ ಎಂದರು.
ಐಸಿಎಂಆರ್ನ ಡಾ.ಆಮ್ಲಿನ್ ಶುಕ್ಲಾ, ಕೆಎಚ್ಟಿಪಿ ಯೋಜನಾ ಮುಖ್ಯಸ್ಥೆ ಡಾ.ಪ್ರಾರ್ಥನಾ, ಹಿರಿಯ ವ್ಯವಸ್ಥಾಪಕಿ ಡಾ.ಆಯಿಷಾ, ಜಿಲ್ಲಾ ಆರ್ಸಿಎಚ್ ಡಾ.ಅಭಿನವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯ್ಕುಮಾರ್, ಡಾ.ಪ್ರೇಮ್ ಮೌನಿ, ಡಾ.ಸುಮನ್ ರಾವ್, ಬಿ.ವೀಣಾ, ಮೇಘಾ ಉಪಸ್ಥಿತರಿದ್ದರು.
ಮಗುವಿನ ಸಾವಿರ ದಿನಗಳ ಅವಧಿ ಅತೀ ಮುಖ್ಯ ಔಷಧೋಪಚಾರಗಳ ಉನ್ನತೀಕರಣಕ್ಕೆ ಕ್ರಮ ಕಡಿಮೆ ತೂಕದ ಮಗು; ನಿಗಾ ವಹಿಸಲು ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.