ಚಿತ್ರದುರ್ಗ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಪಕ್ಷಾತೀತವಾಗಿ ಯುವ ಸಮುದಾಯ ವಿಜಯೋತ್ಸವ ಆಚರಿಸಿತು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಭಾರತದ ತ್ರೀವರ್ಣ ಧ್ವಜ ಹಿಡಿದು ತಾಯಿ ಭಾರತಾಂಬೆ, ಭಾರತೀಯ ಸೈನಿಕರಿಗೆ ಜೈಕಾರ ಕೂಗಿ ಅಭಿಮಾನ ಪ್ರದರ್ಶಿಸಿದರು. ಪ್ರತಿ ಬಾರಿ ಉಗ್ರರ ದಾಳಿ ಆದಾಗಲೂ ನಮ್ಮ ಭಾರತೀಯ ಸೇನೆ ಅವರಿಗೆ ತಕ್ಕ ಉತ್ತರ ಕೊಟ್ಟಿದೆ. ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ನೂರು ಸಲ ವಿಚಾರ ಮಾಡುವಂತೆ ಪಾಠ ಕಲಿಸಿದ್ದಾರೆ ಎಂದು ಹರ್ಷ ವ್ಯಕ್ತಡಿಸಿದರು.
ಇಂದು ದೇಶಾದ್ಯಂತ ಮಾಕ್ ಡ್ರಿಲ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ನಮ್ಮ ಭಾರತೀಯ ಸೇನೆ ಪಾಕ್ ಡ್ರಿಲ್ ಮಾಡಿದೆ. ನೂರಾರು ಉಗ್ರರನ್ನು ಸಂಹಾರ ಮಾಡಲಾಗಿದೆ. ಈ ಮೂಲಕ ಪಹಲ್ಗಾಮ್ ಕೃತ್ಯಕ್ಕೆ ಪ್ರತೀಕಾರ ತೀರಿಸಲಾಗಿದೆ. ಉಗ್ರರ ದಾಳಿ ಪದೇ ಪದೆ ಆಗುತ್ತಿದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದೇ ಬಾರಿ ಎಲ್ಲಾ ಉಗ್ರರನ್ನು ನಿರ್ನಾಮ ಮಾಡಬೇಕು ಎಂದು ಆಗ್ರಹಿಸಿದರು.
‘ಭಾರತ ಮಾತೆಯ ಸಿಂಧೂರ ಜಮ್ಮು ಮತ್ತು ಕಾಶ್ಮೀರ ಎಂಬ ಘೋಷಣೆಯನ್ನು ನಾವು ಪ್ರತಿ ಬಾರಿ ಕೂಗುತ್ತಾ ಬರುತ್ತಿದ್ದೇವೆ. ಕಾಶ್ಮೀರ ಭಾರತ ಮಾತೆಯ ಮುಕುಟ. ಪಹಲ್ಗಾಮ್ನಲ್ಲಿ 25 ಜನ ಸಹೋದರಿಯರ ಸಿಂಧೂರವನ್ನು ಅಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ದೇಶದ ಹೆಮ್ಮೆಯ ಪುತ್ರರು ಅದಕ್ಕೆ ಪ್ರತ್ಯುತ್ತರವನ್ನು ಕೊಟ್ಟಿದ್ದಾರೆ. ಅಖಂಡ ಭಾರತದ ಕನಸು ನನಸಾಗುವ ಸಂದರ್ಭ ಎದುರು ನೋಡುತ್ತಿದ್ದೇವೆ’ ಎಂದು ಮುಖಂಡ ಜಿತೇಂದ್ರ ಹುಲಿಕುಂಟೆ ತಿಳಿಸಿದರು.
‘ಇದು ವಿಜಯೋತ್ಸವ ಅಲ್ಲ. ಪಾಕಿಸ್ತಾನ ಸರ್ವನಾಶಕ್ಕೆ ಭಾರತೀಯ ಸೈನಿಕರು ಪಟಾಕಿಯಂತೆ ಬಾಂಬ್ಗಳನ್ನು ಸಿಡಿಸಿ ಭೂಮಿ ಪೂಜೆ ಮಾಡಿದ್ದಾರೆ. ಪಾಕಿಸ್ತಾನ ಸಂಪೂರ್ಣ ನಾಶವಾದ ನಿಜವಾದ ವಿಜಯೋತ್ಸವ ನಡೆಯಲಿದೆ. ಸದಾ ಶಾಂತಿ ಬಯಸುವ ಭಾರತದ ತಾಳ್ಮೆಯನ್ನೇ ದೌರ್ಬಲ್ಯ ಎಂದು ಭಾವಿಸಿ ಪದೇ ಪದೆ ಉಗ್ರರ ದಾಳಿ ಮೂಲಕ ಶಾಂತಿ ಕದಡುವ ದುಷ್ಕೃತ್ಯಕ್ಕೆ ಸಂಪೂರ್ಣ ಕಡಿವಾಣ ಹಾಕಲು ಭಾರತೀಯ ಸೇನೆ ಕೈಗೊಳ್ಳುವ ಎಲ್ಲ ಕಾರ್ಯಗಳಿಗೆ ದೇಶದ ಎಲ್ಲ ಜನರ ಬೆಂಬಲವಿದೆ’ ಎಂದು ತಿಳಿಸಿದರು.
‘ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ 97 ಸಾವಿರ ಪಾಕಿಸ್ತಾನದ ಸೈನಿಕರು ಭಾರತೀಯ ಸೈನ್ಯದ ಮುಂದೆ ಮಂಡಿಯೂರಿ ಜೀವಭಿಕ್ಷೆ ಬೇಡಿದ್ದನ್ನು ನೆನಪು ಮಾಡಿಕೊಳ್ಳಬೇಕು. ಆದರೆ, ನೇರ ಯುದ್ಧ ನಡೆಸಿ ಜಯಗಳಿಸಲು ಶಕ್ತಿಯಿಲ್ಲದ ಪಾಕಿಸ್ತಾನ ತನ್ನ ಭೂಮಿಯಲ್ಲಿ ಸಹಸ್ರಾರು ಉಗ್ರರಿಗೆ ನೆಲೆ ಕೊಟ್ಟಿದೆ. ಅವರ ಮೂಲಕ ಭಾರತದ ಮೇಲೆ ದಾಳಿ ನಡೆಸುತ್ತಿರುವುದು ವಿಶ್ವಕ್ಕೆ ಗೊತ್ತಿದೆ. ಭಾರತದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಇಂತಹ ಹತ್ತಾರು ದಾಳಿಗಳನ್ನು ಎದುರಿಸಬೇಕಾಗುತ್ತದೆ’ ಎಂದು ಯುವ ಮುಖಂಡ ಎನ್.ಡಿ.ಕುಮಾರ್ ಎಚ್ಚರಿಸಿದರು.
ಯುವ ಮುಖಂಡರಾದ ರುದ್ರೇಶ್, ಮಂಜುನಾಥ್, ವಿಜಯ್, ವೆಂಕಟೇಶ್ ಯಾದವ್, ಗುರುರಾಜ್, ಛಲವಾದಿ ತಿಪ್ಪೇಸ್ವಾಮಿ, ಆದರ್ಶ, ಯೋಗೀಶ್, ನಾಗರಾಜ್ ಸಂಗಂ ಇದ್ದರು.
ನುಡಿದಂತೆ ನಡೆದ ಮೋದಿ
ದೇಶದ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದಂತೆ ಪ್ರಧಾನಿ ಮೋದಿ ಮತ್ತು ನಮ್ಮ ದೇಶದ ಸೈನಿಕರು ನುಡಿದಂತೆ ನಡೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದ್ದಾರೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಅಮಾಯಕ ಪ್ರವಾಸಿಗರನ್ನು ಧರ್ಮ ಕೇಳಿ ಕೊಂದು ದ್ವೇಷದ ಕೃತ್ಯ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೈನಿಕರು ಪಾಕಿಸ್ತಾನದ 9 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.