ಹಿರಿಯೂರು: ಜಿಲ್ಲಾಡಳಿತದಿಂದ ನೀಡುವ ಕಿಟ್ ಪಡೆಯಲು ಇಲ್ಲಿನ ನೆಹರೂ ವೃತ್ತದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರುಒಂದೂವರೆ ಫರ್ಲಾಂಗ್ ಕಾದು ನಿಂತಿದ್ದರು.
ಕಾರ್ಮಿಕ ಇಲಾಖೆಯಿಂದ ಮಂಗಳವಾರ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಿಟ್ ಪಡೆಯಲು ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಂತಿದ್ದ ಕಾರ್ಮಿಕರು ಸಾಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೂ ಹಬ್ಬಿತ್ತು. ಇದರಿಂದಾಗಿ 15ರಿಂದ 20 ಕಾರ್ಮಿಕರಿಗೆ ಕಿಟ್ ವಿತರಿಸಿದ ತಕ್ಷಣ ನೂಕು ನುಗ್ಗಲು ಉಂಟಾಯಿತು. ಇದನ್ನು ತಪ್ಪಿಸಲು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಯಿತು.
‘ತಾಲ್ಲೂಕಿನಲ್ಲಿ 8,926 ನೋಂದಾಯಿತ ಕಾರ್ಮಿಕರಿದ್ದಾರೆ. ಲಾಕ್ಡೌನ್ ವೇಳೆ ಸರ್ಕಾರ ಘೋಷಿಸಿರುವ ₹5 ಸಾವಿರ ಪರಿಹಾರ ಧನವನ್ನು 6,450 ಕಾರ್ಮಿಕರ ಖಾತೆಗೆ ಜಮಾ ಮಾಡಲಾಗಿದೆ. 2,476 ಕಾರ್ಮಿಕರು ಬ್ಯಾಂಕ್ ಖಾತೆ ಸಂಖ್ಯೆ ನೀಡಬೇಕಾಗಿದೆ. ಮಂಗಳವಾರ ಒಂದು ಸಾವಿರ ದಿನಸಿ ಕಿಟ್ ವಿತರಿಸಲಾಗಿದೆ. ತಾಲ್ಲೂಕಿನ ನಾಲ್ಕು ಹೋಬಳಿಗಳಿಗೆ ತಲಾ 500ರಂತೆ ಒಟ್ಟು 3 ಸಾವಿರ ಕಿಟ್ ಬಂದಿದೆ’ ಎಂದು ತಾಲ್ಲೂಕು ಕಾರ್ಮಿಕ ನಿರೀಕ್ಷಕ ಡಿ. ರಾಜಣ್ಣ ತಿಳಿಸಿದರು.
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ‘ಕೋವಿಡ್–19 ಕಾರಣದಿಂದ ಬಡವರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಯಡಿಯೂರಪ್ಪನವರು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಏನೆಲ್ಲ ನೆರವು ನೀಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತಿದ್ದಾರೆ. ಹಸಿವಿನಿಂದ ಯಾರೊಬ್ಬರೂ ಸಾಯಬಾರದು ಎಂಬುದು ಸರ್ಕಾರದ ನಿಲುವು. ತಾಲ್ಲೂಕಿನ ಎಲ್ಲ ಕಾರ್ಮಿಕರಿಗು ಆದ್ಯತೆಯ ಮೇಲೆ ದಿನಸಿ ನೀಡಲಾಗುವುದು’ ಎಂದರು.
ಕಾರ್ಯಕ್ರಮಕ್ಕೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವಿನುತಾ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ನಗರಸಭೆ ಕಂದಾಯ ಅಧಿಕಾರಿ ಲೀಲಾವತಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಪಲ್ಲವ, ತಿಮ್ಮರಾಜ್, ಉಗ್ರಪ್ಪ, ಡಿ. ದಾಸಪ್ಪ, ಬಿ.ಕೆ. ಕರಿಯಪ್ಪ, ಎಂ.ಎಸ್. ರಾಘವೇಂದ್ರ, ಬಿ.ಎನ್. ತಿಪ್ಪೇಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.