ADVERTISEMENT

ಸಂಕಷ್ಟ ಎದುರಿಸಿದ ಸೋಂಕಿತರು

ವೈದ್ಯಕೀಯ ಆಮ್ಲಜನಕ ಪೂರೈಕೆ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಮೇ 2021, 12:32 IST
Last Updated 20 ಮೇ 2021, 12:32 IST

ಚಿತ್ರದುರ್ಗ: ಹರಿಹರದಿಂದ ಪೂರೈಕೆ ಆಗುವ ವೈದ್ಯಕೀಯ ಆಮ್ಲಜನಕದ ಟ್ಯಾಂಕರ್‌ ಬರುವುದು ಎರಡು ಗಂಟೆ ವಿಳಂಬ ಆಗಿದ್ದರಿಂದ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಂಬೂ ಸಿಲಿಂಡರ್‌ ಬಳಸಿ ರೋಗಿಗಳಿಗೆ ಪ್ರಾಣವಾಯು ನೀಡಲಾಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನಿತ್ಯ ಮೂರು ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ಬುಧವಾರ ಎರಡು ಸಾವಿರ ಲೀಟರ್‌ ಮಾತ್ರ ಪೂರೈಕೆ ಆಗಿತ್ತು. ಗುರುವಾರ ಬೆಳಿಗ್ಗೆ 11.30ಕ್ಕೆ ಟ್ಯಾಂಕರ್‌ ಬರಬೇಕಿತ್ತು. ನಿಗದಿತ ಸಮಯಕ್ಕೆ ಟ್ಯಾಂಕರ್‌ ಬಾರದಿರುವುದು ಸಮಸ್ಯೆ ಸೃಷ್ಟಿಸಿತು.

ಜಿಲ್ಲಾ ಆಸ್ಪತ್ರೆಯಲ್ಲಿರುವ 124 ಜಂಬೂ ಸಿಲಿಂಡರ್‌ ಪೈಕಿ 100 ಸಿಲಿಂಡರ್‌ ಕೂಡ ಖಾಲಿ ಆಗಿದ್ದವು. ಆಮ್ಲಜನಕ ಮುಗಿದು ಹೋಗುವ ಕಳವಳವನ್ನು ಸಿಬ್ಬಂದಿ ವ್ಯಕ್ತಪಡಿಸಿದ್ದರು. ಟ್ಯಾಂಕರ್‌ ಬರುವವರೆಗೂ ರೋಗಿಗಳಿಗೆ ಆಮ್ಲಜನಕ ಪೂರೈಸಲು ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಲು ಪರದಾಡಿದರು.

ADVERTISEMENT

ಇದು ಕೋವಿಡ್‌ ವಾರ್ಡ್‌ಗಳಲ್ಲಿ ಆತಂಕ ಸೃಷ್ಟಿಸಿತು. ಅತಿ ಹೆಚ್ಚು ಪ್ರಮಾಣದ ಆಮ್ಲಜನಕದ ಅಗತ್ಯ ಇರುವ ರೋಗಿಗಳು ಏದುಸಿರು ಬಿಡಲಾರಂಭಿಸಿದರು. ದೂರವಾಣಿ ಮೂಲಕ ಸಂಬಂಧಿಕರಲ್ಲಿ ಕಳವಳ ವ್ಯಕ್ತಪಡಿಸಿದರು. ರೋಗಿಗಳ ಸಂಬಂಧಿಕರಲ್ಲಿ ಕೆಲವರು ವಾರ್ಡ್‌ ಪ್ರವೇಶಿಸಿ ಗಾಳಿ ಬೀಸಿದರು. ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.