ಚಿತ್ರದುರ್ಗ: ‘ಕೋವಿಡ್ ಅನ್ನು ಧೈರ್ಯವಾಗಿ ಎದುರಿಸಲು, ಪ್ರಾಣಾಪಾಯದಿಂದ ಪಾರಾಗಲು ಲಸಿಕೆಯೇ ಮದ್ದು. ಆದ್ದರಿಂದ ತಪ್ಪದೇ ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬದವರು ಲಸಿಕೆ ಹಾಕಿಸಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸಲಹೆ ನೀಡಿದರು.
ಇಲ್ಲಿನ ಪೊಲೀಸ್ ಕವಾಯತು ಮೈcovidದಾನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಲಸಿಕೆ ಪಡೆದರೆ ಮಾತ್ರ ಸಾವು ಸಂಭವಿಸುವ ಪ್ರಮಾಣ ತಡೆಯಲು ಸಾಧ್ಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರತರಾದ ಪೊಲೀಸರು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವುದರಿಂದ ಅವರನ್ನೇ ನಂಬಿರುವ ಕುಟುಂಬಕ್ಕೂ ಅನುಕೂಲವಾಗಲಿದೆ’ ಎಂದರು.
‘ಈಗಲೂ ಕೆಲ ಪೊಲೀಸರು ಲಸಿಕೆ ಹಾಕಿಸಿಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಿಬ್ಬಂದಿಯಾಗಲಿ, ಕುಟುಂಬದ ಸದಸ್ಯರಾಗಲಿ ಸಾವಿಗೆ ತುತ್ತಾಗುವುದು ಬೇಡ. ಮಧುಮೇಹ, ರಕ್ತದೊತ್ತಡ, ಕಿಡ್ನಿ, ಹೃದಯ ರೋಗ ಸೇರಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಗೊಂದಲಕ್ಕೆ ಒಳಗಾಗಬೇಡಿ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೇ ಮೊದಲು ಲಸಿಕೆ ಹಾಕಿಸಿಕೊಳ್ಳಬೇಕಿದೆ’ ಎಂದರು.
ಪೊಲೀಸರು ಹಾಗೂ ಅವರ ಕುಟುಂಬದ ಸದಸ್ಯರು ಸೇರಿ 195 ಜನರಿಗೆ ಲಸಿಕೆ ಹಾಕಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ, ಆರ್ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ, ಜಿ.ಎಂ. ತಿಪ್ಪೇಸ್ವಾಮಿ, ಕೆ.ವಿ. ಶ್ರೀಧರ್, ರೋಷನ್ ಜಮೀರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.