ಚಿತ್ರದುರ್ಗ: ಜೋಗಿ ಸಮಾಜ ಸಂಘಟನಾತ್ಮಕ ಹಾಗೂ ಶೈಕ್ಷಣಿಕವಾಗಿ ಪ್ರಬಲವಾದರೆ ಮಾತ್ರ ರಾಜಕೀಯದಲ್ಲಿ ಮುನ್ನಡೆ ಸಾಧಿಸಲು ಸಾಧ್ಯ ಎಂದು ಸಮುದಾಯದ ಮುಖಂಡ ಡಾ. ಜಗದೀಶ್ ಅಭಿಪ್ರಾಯಪಟ್ಟರು.
ಜೋಗಿಮಟ್ಟಿಯ ಜೋಗಿ ಗದ್ದುಗೆಯಲ್ಲಿ ಹಮ್ಮಿಕೊಂಡಿರುವ ಕಾಲಭೈರವೇಶ್ವರ ಸ್ವಾಮಿಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ಜೋಗಿ ಸಮುದಾಯವು ನಾಥಪಂಥಕ್ಕೆ ಅನುಗುಣವಾಗಿ ನಡೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಯುವಕರು ಜೋಗಿ ಸಂಘಟನೆ ಸೇರಬೇಕು. ಒಂದೇ ಸಂಘಟನೆ ಅಡಿಯಲ್ಲಿ ಸಾಗಿದರೆ ರಾಜಕೀಯವಾಗಿ ಪ್ರಬಲರಾಗಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮುದಾಯದ ಪ್ರಾಮುಖ್ಯವನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಎಲ್ಲರೂ ಸೇರಿ 2022ರಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸೋಣ’ ಎಂದರು.
ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಮಠದ ಸುಖದೈವನಾಥ ಸ್ವಾಮೀಜಿ, ಸಾಗರನಾಥ ಸ್ವಾಮೀಜಿ, ಸಿದ್ಧ ಹಂಡಿಬಡಗನಾಥ್ ಸ್ವಾಮೀಜಿ, ರಮತೆ ಯೋಗಿ ನಿವೃತ್ತಿನಾಥ್ ಸ್ವಾಮೀಜಿ, ಶಿವಾಜಿ ಮುದುಕರ್, ಅಖಿಲ ಕರ್ನಾಟಕ ನಾತಪಂಥ ರಾವಳ ಜೋಗಿ ಜನಾಂಗ ಮಹಾಸಭಾದ ಅಧ್ಯಕ್ಷ ಸಿದ್ದಪ್ಪ ಬಾವಲಿ, ಪ್ರತಾಪ್ ಜೋಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.