ಚಿಕ್ಕಜಾಜೂರು: ಗ್ರಾಮಸ್ಥರು ದೇವರ ಹಸುವಿಗೆ ಅಶೃ ತರ್ಪಣದೊಂದಿಗೆ ವಿದಾಯ ಹೇಳಿದ ಘಟನೆ ಗುರುವಾರ ನಡೆಯಿತು.
ಸಮೀಪದ ಕೊಡಗವಳ್ಳಿ ಹಟ್ಟಿ ಗ್ರಾಮದ ಕರಿಯಮ್ಮ ದೇವಿಯ ಹೆಸರಿನಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ ಅವರು 2004ರಲ್ಲಿ ಕರುವೊಂದನ್ನು ಬಿಟ್ಟಿದ್ದರು. ಕರುವಿಗೆ ಗ್ರಾಮಸ್ಥರು ಭಕ್ತಿಯಿಂದ ಪೂಜೆ ಸಲ್ಲಿಸಿ, ಮನೆಯಲ್ಲಿ ಮಾಡಿದ ಅಡುಗೆಯನ್ನು ನೈವೇಧ್ಯವಾಗಿ ಕೊಡುತ್ತಿದ್ದರು. ಕರು ದೊಡ್ಡದಾದ ನಂತರ ಇಲ್ಲಿಯವರೆಗೆ 11 ಕರುವನ್ನು ಹಾಕಿದ್ದು, ಕರುಗಳು ಪ್ರಾಯಕ್ಕೆ ಬರುತ್ತಿದ್ದಂತೆ ಅವುಗಳನ್ನು ಹರಾಜು ಹಾಕಿ, ಬಂದ ಹಣವನ್ನು ದೇವಿಯ ಹೆಸರಲ್ಲಿಡುತ್ತಿದ್ದರು. 11 ಕರುಗಳಿಂದ ಸುಮಾರು ₹ 50 ಲಕ್ಷ ಹಣ ಬಂದಿದ್ದು, ಹಣವನ್ನು ಕರಿಯಮ್ಮ ದೇವಿಯ ದೇವಸ್ಥಾನದ ನಿರ್ಮಾಣಕ್ಕೆ ತೊಡಗಿಸಿ, ದೇವಸ್ಥಾನವನ್ನು ಪೂರ್ಣಗೊಳಿಸಲಾಗಿದೆ.
ಗುರುವಾರ ಬೆಳಿಗ್ಗೆ ಹಸು ಮೃತ ಪಟ್ಟಿದ್ದು, ಗ್ರಾಮಸ್ಥರು ಪಕ್ಷಬೇಧ ಮರೆತು ಎಲ್ಲರೂ ಒಟ್ಟಾಗಿ ದೇವರ ಹಸುವಿಗೆ ಬುಡಕಟ್ಟು ಸಂಪ್ರದಾಯದಂತೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ, ಹಸುವಿನ ಶವವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಮಾಧಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.