ಚಿತ್ರದುರ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಳಲ್ಕೆರೆ ತಾಲ್ಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.
ಲಂಬಾಣಿಹಟ್ಟಿಯ ಹೇಮಂತನಾಯ್ಕ ಎಂಬುವರ ಪತ್ನಿ ಆಶಾ (26) ಹಾಗೂ 10 ತಿಂಗಳ ಗಂಡು ಶಿಶು ಮೃತಪಟ್ಟರು. ಹೆರಿಗೆ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಚಿಕ್ಕಜಾಜೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಲಂಬಾಣಿಹಟ್ಟಿಯ ಹೇಮಂತನಾಯ್ಕ ಹಾಗೂ ಆಶಾ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಹೆರಿಗೆಗೆ ತವರು ಸೇರಿದ್ದ ಆಶಾ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ. ಮಗು ಅನಾಥ ಆಗಬಾರದು ಎಂಬ ಉದ್ದೇಶದಿಂದ ಕೊಲೆ ಮಾಡಿರಬಹು ಎಂದು ಪೊಲೀಸರು ಶಂಕಿಸಿದ್ದಾರೆ.
10 ತಿಂಗಳ ಮಗುವಿಗೆ ಫೆ.26ರಂದು ನಾಮಕರಣ ಸಮಾರಂಭ ಏರ್ಪಡಿಸಲಾಗಿತ್ತು. ಪತಿ ಹೇಮಂತ್ ಹಾಗೂ ತಂದೆ ಮಹಾಂತೇಶನಾಯ್ಕ ಅವರು ಸಮಾರಂಭದ ಸಿದ್ಧತೆಗೆ ಅಗತ್ಯ ಇರುವ ಸಾಮಗ್ರಿ ಖರೀದಿಸಲು ಸೋಮವಾರ ಚಿಕ್ಕಜಾಜೂರಿಗೆ ಹೋಗಿದ್ದರು. ಪಟ್ಟಣದಿಂದ ಸಂಜೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಟಬ್ ನೀರಿನಲ್ಲಿ ಮಗು ಮೃತಪಟ್ಟಿದ್ದು, ಆಶಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.