ಹೊಳಲ್ಕೆರೆ: ತಾಲ್ಲೂಕಿನ ಶಿವಗಂಗಾ ಗ್ರಾಮದಲ್ಲಿ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಅಕ್ಕ–ಭಾವ ಸೇರಿಕೊಂಡು ತಮ್ಮನನ್ನೇ ಕೊಲೆ ಮಾಡಿದ್ದಾರೆ.
ಜ.13ರ ರಾತ್ರಿ ಗ್ರಾಮದಲ್ಲಿ ಬಸವರಾಜ ಎಂಬುವರ ಕೊಲೆ ಯಾಗಿದ್ದು, ಈ ಸಂಬಂಧ ಅವರ ಭಾವ ಹಿರಿಯೂರು ತಾಲ್ಲೂಕಿನ ಪಿಲಾಲಿ ಗ್ರಾಮದ ಎಂ. ತಿಮ್ಮರಾಜು ಹಾಗೂ ಈತನ ಪತ್ನಿ, ಬಸವರಾಜ ಅವರ ಅಕ್ಕ ರಾಧಮ್ಮ ಅವರನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ ಅವರು ಶಿವಗಂಗಾ ಗ್ರಾಮದ ಸ್ಟುಡಿಯೋದಲ್ಲಿ ಪೋಟೋ ಗ್ರಾಫರ್ ಆಗಿದ್ದರು. ಇವರ ಪತ್ನಿ ಕೋವಿಡ್ ಸಂದರ್ಭ ಹೆರಿಗೆಗೆಂದು ತವರು ಮನೆಗೆ ಹೋದವರು ವಾಪಸ್ ಬಂದಿರಲಿಲ್ಲ. ಇದೇ ವೇಳೆ ಅಕ್ಕ ರಾಧಮ್ಮ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ತಮ್ಮನ ಮನೆಯಲ್ಲೇ ವಾಸ ಮಾಡುತ್ತಿದ್ದಳು.
ಬಸವರಾಜ ಭಾವ ತಿಮ್ಮರಾಜುಗೆ ಸ್ವಲ್ಪ ಹಣವನ್ನು ಸಾಲ ಕೊಟ್ಟಿದ್ದ. ತಿಮ್ಮರಾಜು ತನ್ನ ಪತ್ನಿ ಹಾಗೂ ಮಕ್ಕಳನ್ನು ನಮ್ಮ ಮನೆಗೆ ವಾಪಸ್ ಕಳುಹಿಸು ಎಂದಾಗ ‘ನಾನು ಕೊಟ್ಟಿರುವ ಹಣ ಹಾಗೂ ಅದರ ಬಡ್ಡಿ ನಿನ್ನ ಪತ್ನಿ ಹಾಗೂ ಮಕ್ಕಳನ್ನು 2 ವರ್ಷದಿಂದ ಸಾಕಿದ್ದಕ್ಕೆ ₹4 ಲಕ್ಷ ಸೇರಿ ಒಟ್ಟು ₹5 ಲಕ್ಷ ಕೊಡುವವರೆಗೆ ನಿನ್ನ ಪತ್ನಿ, ಮಕ್ಕಳನ್ನು ಕಳುಹಿಸುವುದಿಲ್ಲ. ನೀನು ಅವರನ್ನು ಕರೆಯಲು ಬಂದರೆ ಸಾಯಿಸಿ ಬಿಡುತ್ತೇನೆ’ ಎಂದು ಬಸವರಾಜ ಪ್ರಾಣ ಬೆದರಿಕೆ ಹಾಕಿದ್ದ.
ಇದರಿಂದ ರೋಸಿಹೋಗಿದ್ದ ತಿಮ್ಮರಾಜು, ಬಸವರಾಜ ಬದುಕಿದ್ದರೆ ನಮಗೆ ಆಪತ್ತು. ಇವನು ಬದುಕಿರು ವವರೆಗೆ ನಮಗೆ ನೆಮ್ಮದಿಯಿಲ್ಲ. ಮುಗಿಸಿ ಬಿಡೋಣ ಎಂದು ಪತ್ನಿಯೊಂದಿಗೆ ಸೇರಿ ಸಂಚು ರೂಪಿಸಿದ್ದ.
ಬಸವರಾಜ ಮನೆಯಲ್ಲಿ ಮಲಗಿರು ವಾಗ ತಿಮ್ಮರಾಜು ಬಸವರಾಜನ ಮುಖ ಹಾಗೂ ದೇಹವನ್ನು ಕೊಚ್ಚಿ ಕೊಲೆ ಮಾಡಿದ್ದ. ಆ ಬಳಿಕ ರಾಧಮ್ಮ ರಕ್ತವಾಗಿದ್ದ ಗಂಡನ ಬಟ್ಟೆಗಳು ಹಾಗೂ ಬಸವರಾಜನ ಮೊಬೈಲ್ ಸುಟ್ಟು ಹಾಕಿ ದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಡಿವೈಎಸ್ಪಿ ಎನ್.ಎಸ್. ಅನಿಲ್ಕುಮಾರ್ ಸೂಚನೆಯಂತೆ ಕೊಲೆಗಾರರ ಬಂಧನಕ್ಕೆ ತಂಡ ರಚಿಸಲಾಗಿತ್ತು. ತಂಡದಲ್ಲಿದ್ದ ಹೊಳಲ್ಕೆರೆ ಪಿಎಸ್ಐ ಕೆ.ಎನ್. ರವೀಶ್, ಚಿತ್ರಹಳ್ಳಿ ಗೇಟ್ ಪಿಎಸ್ಐ ಆಶಾ ಮತ್ತು ಸಿಬ್ಬಂದಿ ಜಿ. ನಾಗರಾಜು, ರುದ್ರೇಶ, ಸನಾವುಲ್ಲಾ, ಆರ್.ಡಿ. ರಮೇಶ, ಎನ್. ತಿಮ್ಮಣ್ಣ, ಕೆ.ಜೆ. ಲೊಕೇಶ್, ವೀರೇಶ, ತಿಮ್ಮೇಶ, ಶಿವಣ್ಣ, ಬಿ.ಜಿ. ರವಿಕುಮಾರ, ಗಿರೀಶ, ಸಂತೋಷ, ಮಮತಾ, ಪುಷ್ಪಾ, ಸವಿತಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.