ಚಿತ್ರದುರ್ಗ: ಮುರುಘಾ ಮಠದ ಆಡಳಿತಾಧಿಕಾರಿ ಹಾಗೂ ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಎಸ್.ಕೆ.ಬಸವರಾಜನ್ ಅವರು ಮರುನೇಮಕಗೊಂಡಿದ್ದಾರೆ. 15 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅವರು ಮತ್ತೆ ಮಠಕ್ಕೆ ಮರಳಿದ್ದಾರೆ.
ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನೂತನ ಆಡಳಿತಾಧಿಕಾರಿಯಾಗಿ ಬಸವರಾಜನ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಶಿವಮೂರ್ತಿ ಮುರುಘಾ ಶರಣರು ಮತ್ತು ಎಸ್.ಕೆ. ಬಸವರಾಜನ್ ಅವರು ಒಗ್ಗೂಡಿರುವುದು ಭಕ್ತರಲ್ಲಿ ಸಂಚಲನ ಮೂಡಿಸಿದೆ.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರು ಮುರುಘಾ ಮಠದ ಆಡಳಿತಾಧಿಕಾರಿ ಹಾಗೂ ವಿದ್ಯಾಪೀಠದ ಕಾರ್ಯದರ್ಶಿ ಆಗಿದ್ದರು. ಕಾರಣಾಂತರಗಳಿಂದ 2007ರಲ್ಲಿ ಮಠದಿಂದ ಹೊರಗೆ ಬಂದಿದ್ದರು. ಬಳಿಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜೆಡಿಎಸ್ನಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದರು. 2008ರಿಂದ 2013ರವರೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಹುದಿನಗಳವರೆಗೆ ಮಠದಿಂದ ದೂರವೇ ಉಳಿದಿದ್ದರು.
***
ಮಠದ ಆಡಳಿತದ ಬಗ್ಗೆ ಅನುಭವ ಇರುವ ಕಾರಣಕ್ಕೆ ಗುರುಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲಿದ್ದೇನೆ. ಮಠದ ಶ್ರಯೋಭಿವೃದ್ಧಿಗೆ ಶ್ರಮಿಸಲಿದ್ದೇನೆ.
ಎಸ್.ಕೆ.ಬಸವರಾಜನ್,ಮಾಜಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.