ಸಿರಿಗೆರೆ: ‘ಕಲೆಯಲ್ಲಿ ತೊಡಗಿಸಿಕೊಳ್ಳಲು ಹೆಣ್ಣು, ಗಂಡೆಂಬ ತಾರತಮ್ಯ ಇಲ್ಲ. ಎಲ್ಲರೂ ಕಲೆಯಲ್ಲಿ ಸಾಧನೆ ಮಾಡಬಹುದು’ ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಶ್ರದ್ಧಾಂಜಲಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
‘ವೀರಗಾಸೆ ಜಾನಪದ ಕಲೆಗಳಲ್ಲಿ ಅಪೂರ್ವವಾದುದು. ಇದನ್ನು ಗಂಡು ಕಲೆ ಎಂದೇ ಕರೆಯಲಾಗುತ್ತಿತ್ತು. ಕೆಲವು ವರ್ಷಗಳ ಹಿಂದಿನ ತನಕವೂ ಮಹಿಳೆಯರು ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗುತ್ತಿರಲಿಲ್ಲ. ಈಗೀಗ ಮಹಿಳೆಯರೂ ಕೂಡ ಈ ಕಲೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ’ ಎಂದು ಹೇಳಿದರು.
‘ವೀರಗಾಸೆಯನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಹಿರಿಯ ಕಲಾವಿದರು ನಮ್ಮಲ್ಲಿದ್ದಾರೆ. ಅವರನ್ನು ಬಳಸಿಕೊಂಡು ವೀರಗಾಸೆಯನ್ನು ಬೆಳೆಸಿ, ಉಳಿಸುವ ಕೆಲಸ ಆಗಬೇಕು. ವೀರಗಾಸೆಯ ಇತಿಹಾಸವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ನೀಡುವ ಹಂಬಲ ತಮ್ಮದಾಗಿದ್ದು ಅಂತಹ ಪ್ರಕಟಣೆಯನ್ನು ಮಠದ ವತಿಯಿಂದ ಹೊರತರಲಾಗುವುದು’ ಎಂದರು.
‘ಗುರುಶಾಂತರಾಜ ದೇಶಿಕೇಂದ್ರ ಸ್ವಾಮಿಗಳವರು ತರಳಬಾಳು ಪೀಠದ 19ನೇ ಗುರುಗಳಾಗಿದ್ದರು. ಅತ್ಯಂತ ಶಾಂತ ಸ್ವಭಾವದ ಮೂರ್ತಿಯ ಪ್ರತಿರೂಪದಂತಿದ್ದರು. 1938ರ ಆಸುಪಾಸಿನಲ್ಲಿ ಅವರು ಶಾಲಾ ಕಾಲೇಜು ತೆರೆಯಲಿಲ್ಲವಾದರೂ ಮಕ್ಕಳ ಅನುಕೂಲಕ್ಕಾಗಿ ಪೇಟೆಪಟ್ಟಣಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದ್ದರು’ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಉಪನ್ಯಾಸಕ ನವೀನ್ ಮಂಡಗದ್ದೆ ಮುಖ್ಯ ಅತಿಥಿಯಾಗಿ ಮಾತನಾಡಿ, ‘ಕೋವಿಡ್ ನಂತರ ಸಂಸ್ಕೃತಿ ಮತ್ತು ಕಲೆಗಳು ವಿನಾಶದ ಕಡೆಗೆ ಹೆಜ್ಜೆ ಇಟ್ಟಿವೆ. ಇಂತಹ ವೇಳೆಯಲ್ಲಿ ತರಳಬಾಳು ಮಠವು ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುತ್ತ ಅವುಗಳನ್ನು ಬೆಳೆಸುತ್ತಿರುವುದು ಸಂತೋಷದ ವಿಷಯ’ ಎಂದು ಹೇಳಿದರು.
‘ನಮ್ಮ ಒಳಮನಸ್ಸು ಒಪ್ಪಿಕೊಂಡರೆ ಮಾತ್ರ ನಾವು ಕಲೆಗಳಲ್ಲಿ ತೊಡಗಿಸಿಕೊಳ್ಳಬಹುದು. ಅಂತಹ ಸಂಬಂಧ ದೇಹ ಮತ್ತು ಮನಸ್ಸುಗಳಿಗೆ ಇದೆ. ಕಲೆಗಳ ಕಡೆಗೆ ಮನಸ್ಸು ಕೊಡದದಿರುವ ಈ ಕಾಲಗಟ್ಟದ ಯುವಕರಲ್ಲಿ ಆಸಕ್ತಿ ಬೆಳೆಸಿ ಅವರನ್ನು ಕಲೆಗಳ ಕಡೆಗೆ ಕರೆತರಬೇಕು. ಕಲೆಯನ್ನು ನಮ್ಮೊಳಗೆ ಅನುಭವಿಸಲು ಆರಂಭಿಸಿದರೆ ತಮ್ಮಲ್ಲಿ ಸಾಂಸ್ಕೃತಿಕತೆ, ಚಾರಿತ್ರಿಕತೆ ಮತ್ತು ದೈವಿಕ ಭಾವಗಳು ಬೆಳೆಯುತ್ತವೆ’ ಎಂದರು.
‘ಸರ್ಕಾರವು ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳು 70 ವಯೋಮಾನ ದಾಟಿದವರಿಗೆ ಸಿಗುತ್ತಿವೆ. ಹೊಸ ತಲೆಮಾರಿನ ಯುವಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿದರೆ ಕಲೆಯನ್ನು ಬೆಳೆಸಲು ಅವರಿಂದ ಸಾಧ್ಯವಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಮತ್ತು ಅಕಾಡೆಮಿ ಯೋಚಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ತೀರ್ಪುಗಾರರಾದ ಬಸವರಾಜಪ್ಪ ಅದ್ರಿಕಟ್ಟೆ, ನಿರಂಜನಮೂರ್ತಿ, ಪಾರ್ಥಸಾರಥಿ ವೇದಿಕೆಯಲ್ಲಿದ್ದರು.
ಶಾಲಾ ವಿದ್ಯಾರ್ಥಿನಿ ಪೃಥ್ವಿ ಸ್ವಾಗತಿಸಿದರು.
ಕಲೆಗಳು ನಮ್ಮ ಪರಂಪರೆ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿವೆ. ಪೌರಾಣಿಕ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ವೀರಗಾಸೆಯೂ ಕೂಡ ನಮ್ಮ ವಿಶಿಷ್ಟ ಕಲೆಯಾಗಿ ರೂಪುಗೊಂಡಿದೆನವೀನ್ ಮಂಡಗದ್ದೆ ಉಪನ್ಯಾಸಕ ಕುವೆಂಪು ವಿ.ವಿ
ವಿಜೇತ ತಂಡಗಳು ಪುರವಂತರ ವೀರಗಾಸೆ: ಶ್ರೀ ಸಿದ್ಧೇಶ್ವರ ಪುರವಂತಿಕೆ ಸೇವಾ ಸಂಘ ಅರಳೇಶ್ವರ (ಪ್ರಥಮ) ಶ್ರೀ ವೀರಭದ್ರೇಶ್ವರ ಪುರವಂತರ ಸಮ್ಮಾಳ ಸಂಘ ಹಿರೇಅಣಜಿ (ದ್ವಿತೀಯ) ಶ್ರೀ ವೀರಭದ್ರೇಶ್ವರ ಪುರವಂತರ ಸಮ್ಮಾಳ ಮೇಳಸಂಘ ಮುಳಗುಂದ (ತೃತೀಯ). ಪುರುಷರ ವೀರಗಾಸೆ: ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾಸಂಘ ಕೈನಡು ತಾ–ಹೊಸದುರ್ಗ (ಪ್ರಥಮ) ಶ್ರೀ ಆಂಜನೇಯ ವೀರಗಾಸೆ ಯುವಕ ಸಂಘ ಅರೇಹಳ್ಳಿ (ದ್ವಿತೀಯ) ಶ್ರೀ ಗುರು ರೇಣುಕ ಯುವಕರ ಸಂಘ ಮುಂಡ್ರೆ (ತೃತೀಯ) ಮಹಿಳಾ ವೀರಗಾಸೆ: ಶ್ರಿ ಚಾಮುಂಡೇಶ್ವರಿ ಮಹಿಳಾ ವೀರಗಾಸೆ ಕಲಾತಂಡ ಬಾವಿಕೆರೆ (ಪ್ರಥಮ) ಮಂಜುಶ್ರೀ ಮಹಿಳಾ ವೀರಗಾಸೆ ಕಲಾತಂಡ ದುಗ್ಲಾಪುರ (ದ್ವಿತೀಯ) ವಿಶೇಷ ಬಹುಮಾನ: ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ಸಂಘ ಕುಡ್ಲೂರು ಶ್ರೀ ಕಲ್ಲೇಶ್ವರ ವೀರಗಾಸೆ ಕಲಾ ಸಂಘ ಚಿಕ್ಕ ನಲ್ಲೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.