ಹೊಳಲ್ಕೆರೆ: ರೈತರು ಅಡಿಕೆ ನಾಟಿ ಮಾಡುವಾಗ ಉತ್ತಮ ತಳಿಯ ಬೀಜಗಳನ್ನು ಆಯ್ಕೆ ಮಾಡಬೇಕು ಎಂದು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಂ.ಜಿ.ಬಸವನಗೌಡ ಸಲಹೆ ನೀಡಿದರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ ಕಾರ್ಖಾನೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ‘ಅಡಿಕೆ ಬೆಳೆಯಲ್ಲಿ ಸುಧಾರಿತ ಕೃಷಿ ಪದ್ಧತಿಗಳು’ ಕುರಿತು ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
ಉತ್ತಮ ಅಡಿಕೆ ಇಳುವರಿಗೆ 20 ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮೊದಲು ಉತ್ತಮ ತಳಿ, ಆರೋಗ್ಯವಂತ ಗೋಟು ಆಯ್ಕೆ ಮಾಡಬೇಕು. ಮಡಿಗಳಲ್ಲಿ ಆರೋಗ್ಯವಂತ ಸಸಿಗಳನ್ನು ಮಾತ್ರ ನಾಟಿ ಮಾಡಬೇಕು. ಸಮಾನ ಅಂತರದಲ್ಲಿ ಸಸಿಗಳನ್ನುನಾಟಿ ಮಾಡಬೇಕು. ತೋಟದಲ್ಲಿ ಉತ್ತಮ ಗಾಳಿ, ಬೆಳಕು ಬಂದರೆ ಹೆಚ್ಚು ಇಳುವರಿ ಬರುತ್ತದೆ ಎಂದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ನಾಗರಾಜ್ ಮಾತನಾಡಿ, ‘ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಪರೀಕ್ಷೆ ತಜ್ಞರು ನೀಡುವ ಸಲಹೆಯಂತೆ ಬೆಳೆಗಳಿಗೆ ಗೊಬ್ಬರ ಕೊಡಬೇಕು. ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚು ಕಾಲ ಉಳಿಯುತ್ತವೆ’ ಎಂದರು.
ಸಂಸ್ಥೆಯ ಸಿಇಒ ಅಭಿಲಾಷ್, ಮೈಕ್ರೊ ಬಯಾಲಾಜಿಸ್ಟ್ ಡಾ.ಶಬಾನಾ ಬೇಗಂ, ತಾಂತ್ರಿಕ ಅಧಿಕಾರಿ ಶರ್ಮಾ, ಸತೀಶ್ ಹೆಗಡೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.