ADVERTISEMENT

ಉಪ್ಪೂರಿನಲ್ಲಿ 7.5 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 6:40 IST
Last Updated 28 ಫೆಬ್ರುವರಿ 2011, 6:40 IST

ಬ್ರಹ್ಮಾವರ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮಗುಂಡಿಯಲ್ಲಿ ಮಡಿಸಾಲು ಹೊಳೆಗೆ ರೂ 7.5 ಕೋಟಿ ವೆಚ್ಚದಲ್ಲಿ ಮಲ್ಟಿ ವಿಲೇಜ್ ಸ್ಕೀಮ್ (ಬಹು ಗ್ರಾಮ) ಯೋಜನೆಯಡಿ 5 ಗ್ರಾಮಗಳಿಗೆ ಕೂಡಲೇ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಗೆ ಅಡ್ಡಲಾಗಿ ರೂ 13.4 ಲಕ್ಷ ಅಂದಾಜಿನಲ್ಲಿ ನಬಾರ್ಡ್ 15ರ ಯೋಜನೆಯಡಿ ನಿರ್ಮಿಸಲಾಗುವ ಉಪ್ಪುನೀರು ತಡೆ ಮತ್ತು ಕಿಂಡಿ ಅಣೆಕಟ್ಟಿನ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈ ಯೋಜನೆಯಿಂದ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈಗಾಗಲೇ ಇದಕ್ಕೆ ಹಣ ಮಂಜೂರಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ನೀಲಾವರದಲ್ಲಿ ಸಹ ರೂ 8.5 ಕೋಟಿ ವೆಚ್ಚದಲ್ಲಿ ಮಲ್ಟಿ ವಿಲೇಜ್ ಸ್ಕೀಮ್ ಯೋಜನೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಇನ್ನೆರಡು ವರ್ಷದಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ನೀರಿನ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಉಗ್ಗೇಲ್‌ಬೆಟ್ಟಿನಲ್ಲಿ ನಿರ್ಮಿಸಲಾಗುವ ಕಿಂಡಿ ಅಣೆಕಟ್ಟಿನ ನಿರ್ಮಾಣದಿಂದ ನದಿ ಆಸುಪಾಸಿನ ಆರೂರು, ಉಪ್ಪೂರು, ಹೇರೂರು ಮತ್ತು ಹಾವಂಜೆಯ ಸುಮಾರು 50 ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗಲಿದ್ದು, ಮೂರು ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ. ಈ ಅಣೆಕಟ್ಟು 10 ಅಡಿ ಅಗಲವಿರುವುದರಿಂದ ಹೆರಂಜೆ ಮತ್ತು ಉಪ್ಪೂರು ನಡುವೆ ನೇರ ಸಂಪರ್ಕವಾಗಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಜಯಪ್ರಕಾಶ್ ಹೆಗ್ಡೆ, ಮೈಸೂರು ಟೊಬ್ಯಾಕೋ ಕಂಪೆನಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಉಪ್ಪೂರು ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಣ್ಣನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್, ಸಹಾಯಕ ಎಂಜಿನಿಯರ್ ಕೃಷ್ಣಮೂರ್ತಿ, ಗುತ್ತಿಗೆದಾರ ಕುಂದಾಪುರದ ಗೋಕುಲ್ ಶೆಟ್ಟಿ, ಉಪ್ಪೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸದಸ್ಯರಾದ ರಮೇಶ್ ಕರ್ಕೇರ, ಜ್ಯೋತಿ ಪೂಜಾರ್ತಿ, ಬೇಬಿ, ಗಾಯತ್ರಿ, ಕುಂಜಾಲು ಗ್ರಾ.ಪಂ.ಉಪಾಧ್ಯಕ್ಷ ರಾಜು ಕುಲಾಲ, ಉಪ್ಪೂರು ದೇವಳದ ಪರಮೇಶ್ವರ ಮಧ್ಯಸ್ಥ, ಸಂತೋಷ್ ಕೋಟ್ಯಾನ್, ಆನಂದ್ ಮಟಪಾಡಿ, ಸಂತೋಷ್ ಜತ್ತನ್ನ, ಶಂಕರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.