ADVERTISEMENT

ಕಳಪೆ ಪ್ಲಾಸ್ಟಿಕ್ ಕೈಚೀಲ: ಅಂಗಡಿಗಳಿಗೆ ದಾಳಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 9:30 IST
Last Updated 21 ಜನವರಿ 2011, 9:30 IST

ಮಂಗಳೂರು: ನಿಗದಿತ ಗಾತ್ರ(ಮೈಕ್ರಾನ್)ಕ್ಕಿಂತಲೂ ತೆಳುವಾದ ಪ್ಲಾಸ್ಟಿಕ್ ಕೈಚೀಲಗಳನ್ನು (ತೊಟ್ಟೆ) ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ನಗರದ ವಿವಿಧೆಡೆ ಜಂಟಿ ದಾಳಿ ನಡೆಸಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.ಕನಿಷ್ಠ 20 ಮೈಕ್ರಾನ್ ಅಥವಾ ಅದಕ್ಕೂ ಹೆಚ್ಚು ದಪ್ಪವಾದ ಪ್ಲಾಸ್ಟಿಕ್ ಕೈಚೀಲಗಳನ್ನೇ ಬಳಸಬೇಕು ಎಂಬ ಪರಿಸರ ಮಂಡಳಿ ಆದೇಶವಿದ್ದರೂ, ಉಲ್ಲಂಘಿಸಿ ಹಲವೆಡೆ ಕಳಪೆ ಗುಣಮಟ್ಟದ ಕೈಚೀಲ ಮಾರಾಟ ಮಾಡಲಾಗುತ್ತಿದೆ.

ಈ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್ ನೇತೃತ್ವದಲ್ಲಿ ಗುರುವಾರ ದಿಢೀರ್ ದಾಳಿ ನಡೆಸಲಾಯಿತು. ನಗರದ ಸೆಂಟ್ರಲ್ ಮಾರ್ಕೆಟ್, ಹಂಪನಕಟ್ಟೆ ಬಳಿಯ ಗೋಕುಲ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, ದಾಸ್ತಾನು ಮಾಡಿಟ್ಟಿದ್ದ ಪ್ಲಾಸ್ಟಿಕ್ ಕೈಚೀಲಗಳ ಗುಣಮಟ್ಟ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ವಿಜಯಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡದಂತೆ ಈಗಾಗಲೇ ಪಾಲಿಕೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಇವುಗಳ ಬಳಕೆ ನಿಂತಿಲ್ಲ.ಮುಂಬರುವ ದಿನಗಳಲ್ಲಿ ಇಂತಹ ಪ್ರವೃತ್ತಿ ಮತ್ತೆ ಕಂಡುಬಂದರೆ ಅಂಗಡಿಗಳ ಲೈಸನ್ಸ್ ರದ್ದು ಮಾಡಲು ಚಿಂತನೆ ನಡೆಸಲಾಗುವುದು ಎಂದರು. ಪಾಲಿಕೆ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಸದಸ್ಯೆ ಶಾಂತಾ, ಪರಿಸರ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.