ಸುಳ್ಯ: ಕಾರ್ಮಿಕ ಕಲ್ಯಾಣಕ್ಕಾಗಿ ಕೇವಲ 392 ಕೋಟಿ ನೀಡುವ ಮೂಲಕ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನಸರಿಸಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನ ಕುಮಾರ್ ಆರೋಪಿಸಿದರು.
ಸೋಮವಾರ ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಪ್ರಸ್ತಾವನೆಗಳನ್ನು ನೋಡಿದಾಗ ತೀವ್ರಗತಿಯಲ್ಲಿ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತವೆ. ಮೂಲ ಸೌಕರ್ಯಗಳು, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡದೇ ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಲಾಗಿದೆ. 16,831 ಕೋಟಿ ಕೊರತೆ ಬಜೆಟ್ ಮಂಡಲಾಗಿದೆ. ಅಲ್ಲದೆ ತೆರಿಗೆಯೇತರ ಆದಾಯದ ಪ್ರಸ್ತಾವನೆಯನ್ನೂ ಒಳಗೊಂಡಿಲ್ಲ ಎಂದರು.
ಸೇವಾ ತೆರಿಗೆ, ಮಾರಾಟ ತೆರಿಗೆ ಹೆಚ್ಳ ಮಾಡಿ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹಾಕಲಾಗಿದೆ. ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ ನಿದೇರ್ಶಶನದಂತೆ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ ಎಂದವರು ಹೇಳಿದರು.
ಗ್ರಾಮೀಣ ಅಭಿವೃದ್ಧಿಗೆ ಕಳೆದ ವರ್ಷ 5,134 ಕೋಟಿ ವೆಚ್ಚ ಮಾಡಲಾಗಿದ್ದರೂ, ಈ ಬಾರಿ ಕೇವಲ 4,672 ಕೋಟಿ ಮಾತ್ರ ಇಡಲಾಗಿದೆ. ಕುಡಿಯವ ನೀರಿಗೆ ಕಳೆದ ವರ್ಷ 385 ಕೋಟಿ ಖರ್ಚು ಮಾಡಿದ್ದರೂ, ಈ ಬಾರಿ 376 ಕೋಟಿ ಮಾತ್ರ ಮೀಸಲಿಡಲಾಗಿದೆ.
ಕಳೆದ ವರ್ಷ 857 ಕೋಟಿ ನೈಸರ್ಗಿಕ ವಿಕೋಪಗಳಿಗೆ ಪರಿಹಾರ ನೀಡಲಾಗಿದ್ದರೂ ಈ ವರ್ಷ ಕೇವಲ 417 ಕೋಟಿ ಇಡಲಾಗಿದೆ. ವಿದ್ಯುತ್ ರಂಗಕ್ಕೆ ಕಳೆದ ವರ್ಷ 6,354 ಕೋಟಿ ಖರ್ಚು ಮಾಡಿದ್ದರೆ, ಈ ಬಾರಿ 5,273 ಕೋಟಿ ತೆಗೆದಿರಿಸಲಾಗಿದೆ. ವಿಶ್ವ ಬ್ಯಾಂಕ್ ಐಡಿಬಿಗಳ ಸಾಲದ ಬಡ್ಡಿ ಪಾವತಿಗೆ ಎಂಟೂವರೆ ಸಾವಿರ ಕೋಟಿ ಇಡಲಾಗಿದೆ ಎಂದವರು ಹೇಳಿದರು.
ಪಿಪಿಪಿ ಮೂಲಕ ರಸ್ತೆ ಅಭಿವೃದ್ಧಿ ಮಾಡುವುದನ್ನು ಪ್ರಬಲವಾಗಿ ವಿರೋಧಿಸಿದ ಅವರು, ರಸ್ತೆಗಳಲ್ಲಿ ಟೋಲ್ ಸಂಗ್ರಸಿಸುವ ಮೂಲಕ ಸಾರ್ವಜನಿಕ ಹೂಡಿಕೆ- ಖಾಸಗಿಯವರಿಗೆ ಲಾಭ ಎಂಬಂತಾಗಿದೆ. ಗುತ್ತಿಗೆ ಪೌರ ಕಾರ್ಮಿಕರ ಕೂಲಿಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ ಎಂದರು.
25ರಂದು ವಿಧಾನ ಸೌಧ ಚಲೋ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ 12 ಸಾವಿರ ನೌಕರರು ದುಡಿಯುತ್ತಿದ್ದು, ಅವರಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ. ಅವೈಜ್ಞಾನಿಕ ಆಡಳಿತ ವಿಧಾನ, ಅಕ್ರಮ ದಂಡಗಳು, ಡಬ್ಬಲ್ ಡ್ಯೂಟಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಜು.25ರಂದು ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು. ಶಿವರಾಮ ಗೌಡ, ಬಿ.ಎಂ.ಭಟ್, ವಸಂತ ಆಚಾರಿ, ರಾಬರ್ಟ್ ಡಿ ಸೋಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.