ಬ್ರಹ್ಮಾವರ: ಕಳೆದ 50 ವರ್ಷಗಳಿಂದಲೂ ಅಭಿವೃದ್ಧಿ ಕಾಣದ ಕುಂಜಾಲು ಮತ್ತು ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಹೇಬ್ರ ಕುದ್ರು, ರಾಮನ ಕುದ್ರು, ಶೆಟ್ರ ಕುದ್ರು ಪ್ರದೇಶಕ್ಕೆ ರೂ. 1.12 ಕೋಟಿ ಮಂಜೂರಾತಿ ಗಾಗಿ ಯೋಜನೆ ರೂಪಿಸಲಾಗಿದೆ.
ಕುದ್ರು ಪ್ರದೇಶದಲ್ಲಿರುವ ಜನತೆಯೊಂದಿಗೆ ಮತ್ತು ಹಂದಾಡಿ ಮತ್ತು ಕುಂಜಾಲು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಮತ್ತು ಅಲ್ಲಿ ವಾಸಿಸುವ ಜನರ ಒಟ್ಟು ಅಭಿಪ್ರಾಯದಂತೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಸರ್ಕಾ ರದ ಎರಡು ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ನಬಾರ್ಡ್ ಯೋಜನೆಯಡಿ ಮಟಪಾಡಿಯಿಂದ ಸಾಹೇಬರ ಕುದ್ರುವಿಗೆ ರೂ. 36 ಲಕ್ಷ, ಸಾಹೇಬರ ಕುದ್ರುನಿಂದ ಬಾರ್ಕೂರು ರಸ್ತೆಗೆ ರೂ. 26 ಲಕ್ಷ, 2 ಕಿರುಸೇತುವೆ ಮತ್ತು ರಸ್ತೆ ಏರಿಸಿ ಡಾಂಬರೀಕರಣಗೊಳಿಸುವುದಕ್ಕೆ ಹಣ ಮಂಜೂರಾತಿಯಾಗಿ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಸಾಹೇಬರ ಕುದ್ರು ಸಂಪರ್ಕ ರಸ್ತೆಗೆ ರೂ. 35 ಲಕ್ಷ ಮತ್ತು ನಂದನ ಕುದ್ರು ಸಂಪರ್ಕ ರಸ್ತೆಗೆ ರೂ. 10 ಲಕ್ಷ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಳೆಗಾಲ ಮುಗಿದ ಕೂಡಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕುಡಿಯಲು ಶುದ್ಧವಾದ ನೀರಿನ ಸಮಸ್ಯೆ, ಮಳೆಗಾಲದಲ್ಲಿ ಉಕ್ಕಿ ಹರಿಯುವ ಸೀತಾನದಿಯ ಪ್ರವಾಹದಿಂದ ಮನೆಯೊಳಗೆಲ್ಲಾ ನುಗ್ಗುವ ನೀರು, ಬಸ್ಸಂಚಾರದ ರಸ್ತೆಗೆ ಬರಲು ನಾಲ್ಕು ಕಿ.ಮೀ ನಡೆದು ಬರಬೇಕಾದ ಪರಿಸ್ಥಿತಿ. ಈ ಎಲ್ಲಾ ಸಮಸ್ಯೆಗಳ ಬಗ್ಗೆ `ಪ್ರಜಾವಾಣಿ~ ಕಳೆದ ತಿಂಗಳು ಗಮನ ಸೆಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.