ADVERTISEMENT

ಕೇರಳ ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:00 IST
Last Updated 20 ಸೆಪ್ಟೆಂಬರ್ 2011, 9:00 IST

ಕಾಸರಗೋಡು: ಕಾಸರಗೋಡಿನಲ್ಲಿ ಕೇರಳ ಕೊಂಕಣಿ ಅಕಾಡೆಮಿ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಎನ್.ಎ.ನೆಲ್ಲಿಕುಂಜೆ ಹೇಳಿದರು.

ನಗರದ ಲಲಿತಕಲಾ ಸದನದಲ್ಲಿ ಕರ್ನಾಟಕ ಕೊಂಕಣಿ ಅಕಾಡೆಮಿ ಮತ್ತು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಗೌಡ ಸಾರಸ್ವತ ಸೇವಾ ಸಂಘದ ಆಶ್ರಯದಲ್ಲಿ ಶನಿವಾರ ನಡೆದ `ಗಡಿನಾಡು ಕೊಂಕಣಿ ಸಂಸ್ಕೃತಿ ಸಂಭ್ರಮ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಸಪ್ತಭಾಷಾ ಸಂಗಮ ಭೂಮಿಯಾಗಿದ್ದು, ಇಲ್ಲಿನ ಸಂಸ್ಕೃತಿ-ಸಾಹಿತ್ಯ ಸಂವರ್ಧನೆಗೆ ಸಪ್ತಭಾಷಾ ಕೇಂದ್ರ ಸ್ಥಾಪಿಸಬೇಕು. ಈ ಬಗ್ಗೆ ಸರ್ಕಾರದ ಗಮನಸೆಳೆದಿದ್ದೇನೆ. ಎಲ್ಲಾ ಭಾಷೆಗಳಿಗೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ. ಇದರ ಬಗ್ಗೆ ರಾಜ್ಯ ಸಂಸ್ಕೃತಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ ಮಾತನಾಡಿ, ಕೊಂಕಣಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ಅಕಾಡೆಮಿ ಕಚೇರಿಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಗೌಡ ಸಾರಸ್ವತ ಸೇವಾ ಸಂಘದ ಟ್ರಸ್ಟಿ ಕೆ.ಗಿರಿಧರ್ ಕಾಮತ್, ಅವರ್ ಲೇಡಿ ಆಫ್ ಡಾಲರ್ಸ್‌ ಇಗರ್ಜಿಯ ಧರ್ಮಗುರು ನವೀನ್ ಡಿ~ಸೋಜಾ, ಕಾಟುಕುಕ್ಕೆ ದುರ್ಗಾಪರಮೆಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಂತ ನಾಯಕ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮಂಗಲ್ಪಾಡಿ ನಾಮದೇವ ಶೆಣೈ,  ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಉಪ್ಪಂಗಳ ನಾರಾಯಣ ಶರ್ಮ, ಗೌಡ ಸಾರಸ್ವತ ಸೇವಾ ಸಂಘದ ಅಧ್ಯಕ್ಷ ಎಂ.ವರದರಾಜ ಶೆಣೈ, ಕರ್ನಾಟಕ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ, ಕೆ.ಪಿ.ಶೆಣೈ, ಎ.ರವೀಂದ್ರ ರಾವ್ ಮತ್ತಿತರರು ಇದ್ದರು.

ಬಳಿಕ ಬಹುಭಾಷಾ ಕವಿಗೋಷ್ಠಿ, ನೃತ್ಯವೈವಿಧ್ಯ, ಶಿವಮೊಗ್ಗದ ವಾಗ್ದೇವಿ ಮಹಿಳಾ ಯಕ್ಷರಂಗದ `ವೀರ ಅಭಿಮನ್ಯು~ ಕೊಂಕಣಿ ಮಹಿಳೆಯರ ಯಕ್ಷಗಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.