ADVERTISEMENT

ಕ್ಯಾಂಪ್ಕೊ ದೇಶಕ್ಕೆ ಮಾದರಿ: ಶೋಭಾ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 10:00 IST
Last Updated 24 ಏಪ್ರಿಲ್ 2011, 10:00 IST
ಕ್ಯಾಂಪ್ಕೊ ದೇಶಕ್ಕೆ ಮಾದರಿ: ಶೋಭಾ
ಕ್ಯಾಂಪ್ಕೊ ದೇಶಕ್ಕೆ ಮಾದರಿ: ಶೋಭಾ   

ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯು ಆಹಾರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ ಮಾತ್ರವಲ್ಲದೆ ದೇಶಕ್ಕೆ ಮಾದರಿಯಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪಟ್ಟಣದಲ್ಲಿ ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಶನಿವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ 300 ಮೆಟ್ರಿಕ್ ಟನ್ ಸಾಮರ್ಥ್ಯದ ಯೋಜಿತ ಉಗ್ರಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

 ಅಡಿಕೆ ಬೆಳೆಗಾರರಿಗೆ ತೊಂದರೆಯಾದಾಗ ಸಂಸ್ಥೆಯು ಬೆಳೆಗಾರರ ಉಳಿವಿಗಾಗಿ ಶ್ರಮಿಸಿರುವುದು ಶ್ಲಾಘನೀಯ ಎಂದರು. ಕ್ಯಾಂಪ್ಕೊ ಉಚಿತವಾಗಿ ಮೆಸ್ಕಾಂ ಇಲಾಖೆಗೆ ನೀಡಿದ ನಿವೇಶನದಲ್ಲಿ ಮೆಸ್ಕಾಂನಿಂದ 3311ಕೆ.ವಿ. ಉಪಕೇಂದ್ರದಲ್ಲಿ 5.ಮೆ. ವಾ. ಸಾಮರ್ಥ್ಯದ 5 ಟ್ರಾನ್ಸ್‌ಫಾರ್ಮರ್ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 2 ಟ್ರಾನ್ಸ್‌ಫಾರ್ಮರ್‌ನಿಂದ ಕ್ಯಾಂಪ್ಕೊಗೆ ಹಾಗೂ ಉಳಿದ 3 ಟ್ರಾನ್ಸ್‌ಫಾರ್ಮರ್‌ನಿಂದ ಪುತ್ತೂರಿನ ಜನತೆಗೆ ವಿದ್ಯುತ್ ನೀಡಲಾಗುವುದು ಎಂದು ಅವರು ಹೇಳಿದರು.

ವ್ಯಾಮ್ ಯಂತ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಗಳಲ್ಲಿ ಚಾಕ್ಲೇಟ್ ಸುತ್ತುವ ಬದಲು ಕಾಗದಗಳ ಬಳಕೆಯ ಕುರಿತು ಚಿಂತನೆ ನಡೆಸುವಂತೆ ಸಂಸ್ಥೆಯ ಅಧ್ಯಕ್ಷರಿಗೆ ಸೂಚಿಸಿದರು.

ಸಂಸ್ಥೆಯು ತನ್ನ ಉತ್ಪನ್ನಗಳಲ್ಲಿ ಶುದ್ದ ಕುಡಿಯುವ ನೀರು ಹಾಗೂ ಹಾಳೆ ತಟ್ಟೆಗಳ ಉತ್ಪನ್ನವನ್ನು ಸೇರ್ಪಡೆಗೊಳಿಸಿ ಅದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸುವಂತೆ ಅವರು ವಿನಂತಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ವಿಸ್ತೃತ ಚಾಕಲೇಟು ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ವಿಸ್ತೃತ ಎಕ್ಲೇರ್ 3ನೇ ಘಟಕವನ್ನು ಉದ್ಘಾಟಿಸಿದರು. ಕ್ಯಾಂಪ್ಕೊ ಸಂಸ್ಥೆ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಮಲ್ಲಿಕಾ ಪ್ರಸಾದ್, ಪುರಸಭಾ ಅಧ್ಯಕ್ಷೆ ಕಮಲಾ ಅನಂದ್, ಜಿ.ಪಂ. ಅಧ್ಯಕ್ಷೆ ಶೈಲಜ ಭಟ್, ತಾ.ಪಂ. ಅಧ್ಯಕ್ಷ ಶಂಭು ಭಟ್, ಮೆಸ್ಕಾಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಕೆ. ಸತೀಶ್ಚಂದ್ರ ಭಂಡಾರಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಭಟ್, ಅಬ್ದುಲ್ ಖಾದರ್ ಕೂರ್ನಡ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.