ADVERTISEMENT

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:37 IST
Last Updated 21 ಸೆಪ್ಟೆಂಬರ್ 2013, 9:37 IST
ನಡುಪದವು ಸಮೀಪದ ಚೆಂಬೆತೋಟ ಕಲ್ಲರ್ಬೆ ಬಳಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ನಿರ್ಮಾಣಗೊಂಡ ಕುಡಿಯುವ ನೀರು ಪೂರೈಕೆ ಘಟಕವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಶುಕ್ರವಾರ ಉದ್ಘಾಟಿಸಿದರು.
ನಡುಪದವು ಸಮೀಪದ ಚೆಂಬೆತೋಟ ಕಲ್ಲರ್ಬೆ ಬಳಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ನಿರ್ಮಾಣಗೊಂಡ ಕುಡಿಯುವ ನೀರು ಪೂರೈಕೆ ಘಟಕವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಶುಕ್ರವಾರ ಉದ್ಘಾಟಿಸಿದರು.   

ಮುಡಿಪು: ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿ­ದರೆ ಮಾತ್ರ ಭಾರತ ಅಭಿವೃದ್ದಿಯನ್ನು ಕಾಣಲು ಸಾಧ್ಯ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಸೌಲಭ್ಯಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು, ಸರ್ಕಾರದಿಂದ ಸಿಗುವ ಅನುದಾನದ ಸದ್ಬಳಕೆ ಆಗಬೇಕಾಗಿದೆ. ಜನಪ್ರತಿನಿಧಿ­ಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಗ್ರಾಮೀಣಾ­ಭಿವೃದ್ಧಿ ಖಂಡಿತ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಅಭಿಪ್ರಾಯ ಪಟ್ಟರು.

ಕೈರಂಗಳ ಸಮೀಪದ ನಡುಪದವಿನ ಚೆಂಬೆತೋಟ ಕಲ್ಲರ್ಬೆ ಬಳಿ ಜಿಲ್ಲಾ ಪಂಚಾಯಿತಿ ಅನುದಾನ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ­ಗೊಂಡ ಕುಡಿಯುವ ನೀರಿನ ಯೋಜನಾ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚೆಂಬೆತೋಟ- ಕಲ್ಲರ್ಬೆ ಪರಿಸರದಲ್ಲಿ ಕುಡಿಯುವ ನೀರಿಗಾಗಿ ಜನರು ಬಹಳಷ್ಟು ಸಮಸ್ಯೆ ಎದುರಿ­ಸುತ್ತಿದ್ದರು.

ಆದ್ದರಿಂದ ಈ ಸಮಸ್ಯೆಯನ್ನು ಪರಿ­ಹರಿಸುವ ಸಲುವಾಗಿ ಇಲ್ಲಿ ಈ ಕುಡಿಯುವ ನೀರಿಗಾಗಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಈ ಪ್ರದೇಶದ ಸುಮಾರು 50ರಷ್ಟು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ದೊರಕಿದಂತಾಗಿದೆ. ಅಲ್ಲದೆ ಇನ್ನಷ್ಟು ಮೂಲಸೌಲಭ್ಯಗಳ ವಿಸ್ತರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಅವರು ಮಾತನಾಡಿ ಗ್ರಾಮದ ಕೆಲವೊಂದೆಡೆ ಕುಡಿಯುವ ಸಮಸ್ಯೆಗೆ ಈ ಬಾರಿ ಬಂದ ಜಿಲ್ಲಾ ಪಂಚಾಯಿತಿ ಅನುದಾನದಿಂದಾಗಿ ಹೆಚ್ಚಿನ ಕಡೆಗಳ ಸಮಸ್ಯೆ ಬಗೆಹರಿದಿದೆ. ಅಲ್ಲದೆ ಇನ್ನಷ್ಟು ಅಭಿವೃದ್ದಿ ಕೆಲಸಗಳು ನಡೆಯಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಸುಲೈಮಾನ್, ನಯನ, ಯಮುನ, ಸಮಾಜ ಸೇವಕರಾದ ನಂದರಾಜ್ ಶೆಟ್ಟಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಪಿಡಿಒ ಉಗ್ಗಪ್ಪ ಮೂಲ್ಯ, ಸ್ಥಳೀಯರಾದ ಅಬ್ಬು, ಶರೀಫ್, ರಫೀಕ್, ಅಬ್ದುಲ್ಲಾ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT