ADVERTISEMENT

ದಿಢೀರ್ ಪರಿಶೀಲನೆ- ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 6:00 IST
Last Updated 14 ಜೂನ್ 2013, 6:00 IST

ಮಂಗಳೂರು: ಡೆಂಗೆಯಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ನೀಡಿದ ಅಸಮರ್ಪಕ ಉತ್ತರದಿಂದ ಬೇಸತ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ದಿಢೀರ್ ಪರಿಶೀಲನೆ ನಡೆಸುವಂತೆ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

`ಪಿಡಿಒಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯವನ್ನು ನೋಡಲ್ ಅಧಿಕಾರಿಗಳು ಮಾಡಬೇಕು. ಆರೋಗ್ಯ ಇಲಾಖೆಯ ವಿಚಕ್ಷಣಾ ದಳ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಪಿಡಿಒಗಳು ದಿಢೀರ್ ಭೇಟಿ ನೀಡುವ ಮೂಲಕ ಸ್ವಚ್ಛತಾ ಲೋಪ ಇರುವ ಹೋಟೆಲ್, ಕೋಳಿ, ಹಂದಿ ಸಾಕಣೆ ಕೇಂದ್ರ ಇನ್ನಿತರ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ನಿತ್ಯ ಉಪಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು' ಎಂದು ಅವರು ಸೂಚಿಸಿದರು.

ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಡೆಂಗೆ ನಿಯಂತ್ರಣ ಬಗ್ಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದ ಬಗ್ಗೆ ಜಿ.ಪಂ ಸದಸ್ಯರು ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಇಒ ಅವರು ಎಂದಿನ ಶೈಲಿಯಲ್ಲಿ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.

`ಜಿಲ್ಲೆಯ ಯು.ಟಿ ಖಾದರ್ ಅವರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಲಿಸಾ ರಕ್ತ ಪರೀಕ್ಷಾ ಕೇಂದ್ರ ತೆರೆಯಲು ಹಾಗೂ ಗ್ರಾಮೀಣ ಪ್ರದೇಶಕ್ಕೆ ಆಂಬುಲೆನ್ಸ್ ಸೇವೆ ಒದಗಿಸಲು ಎಷ್ಟು ಹೆಚ್ಚುವರಿ ಅನುದಾನ ಬೇಕಾಗುತ್ತದೆ ಎಂಬ ಬಗ್ಗೆಯೂ ಅಂದಾಜುವೆಚ್ಚ ರೂಪಿಸಿದರೆ ಹಣ ಹೊಂದಿಸುವುದು ಕಷ್ಟವಲ್ಲ. ಆರೋಗ್ಯ ಅಧಿಕಾರಿಗಳು ಡೆಂಗೆ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಅಂಕಿ ಅಂಶ ನೀಡುವುದರ ಜತೆ ರಚನಾತ್ಮಕವಾಗಿ ಚಿಂತಿಸಬೇಕು' ಎಂದರು.

ಸಭೆ ನಡೆಸಿದರೆ ಸಾಲದು
`ಸಭೆ ನಡೆಸಿ ಅಂಕಿ-ಅಂಶಗಳನ್ನು ನೀಡುವುದರಿಂದ ಪ್ರಯೋಜನ ಆಗುವುದಿಲ್ಲ. ಉದ್ದೇಶ ಈಡೇರಬೇಕಿದ್ದರೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು. ಗುತ್ತಿಗಾರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದ ಹೋಟೆಲ್ ಇನ್ನಿತರ ಕೇಂದ್ರಗಳನ್ನು ಮುಚ್ಚುವ ಮೂಲಕ ನಾವಿದನ್ನು ಮಾಡಿ ತೋರಿಸಿದ್ದೇವೆ' ಎಂದು ಸದಸ್ಯ ದೇವರಾಜ್ ಹೇಳಿದರು.

`ಸದಸ್ಯರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕು. ಮಾಹಿತಿ ಇಲ್ಲದೇ ಸಭೆಗೆ ಬರಬಾರದು' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದರು.

ಜಿ.ಪಂ. ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ ಹಾಗೂ ಜಯಶ್ರೀ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.