ADVERTISEMENT

ನಕ್ಸಲ್ ಪೀಡಿತ ಮತಗಟ್ಟೆ: ಡಿಸಿ, ಎಸ್‌ಪಿ ಭೇಟಿ

ಬೆಳ್ತಂಗಡಿಯಲ್ಲಿ ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:23 IST
Last Updated 11 ಏಪ್ರಿಲ್ 2018, 12:23 IST
ಬೆಳ್ತಂಗಡಿ ತಾಲ್ಲೂಕಿನ ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಮತ್ತು ಎಸ್‌ಪಿ ರವಿಕಾಂತೇಗೌಡ ಮಂಗಳವಾರ ಭೇಟಿ ನೀಡಿದರು.
ಬೆಳ್ತಂಗಡಿ ತಾಲ್ಲೂಕಿನ ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಮತ್ತು ಎಸ್‌ಪಿ ರವಿಕಾಂತೇಗೌಡ ಮಂಗಳವಾರ ಭೇಟಿ ನೀಡಿದರು.   

ಬೆಳ್ತಂಗಡಿ: ತಾಲ್ಲೂಕಿನ ನಕ್ಸಲ್ ಪೀಡಿತ ಪ್ರದೇಶ ಮತಗಟ್ಟೆಗಳಿಗೆ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಎಸ್‌ಪಿ ಡಾ.ಬಿ.ಆರ್.ರವಿಕಾಂತೇ ಗೌಡ ಭೇಟಿ ನೀಡಿದರು.

ತಾಲ್ಲೂ‌ಕಿನ ರಾಷ್ಟ್ರೀಯ ಉದ್ಯಾನವನದೊಳಗಿರುವ ನಕ್ಸಲ್ ಪೀಡಿತ ಪ್ರದೇಶಗಳಾದ ನಾರಾವಿ, ಕುತ್ಲೂರು, ನಾವರ, ಕರಿಯಾಳ ಹಾಗೂ ದಿಡುಪೆ ಪ್ರದೇಶಗಳಿಗೆ ಭೇಟಿ ನೀಡಿದರು.

ಮಲವಂತಿಗೆ ಗ್ರಾಮದ ಜನರ ಹಲವಾರು ವರ್ಷಗಳ ಬಹುಮುಖ್ಯ ಬೇಡಿಕೆಯಾದ ದಿಡುಪೆ-ಎಳನೀರು-ಸಂಸೆ ರಸ್ತೆಯ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಬೇಡಿಕೆ ಇಟ್ಟರು.

ADVERTISEMENT

‘ಮಲವಂತಿಗೆ ಗ್ರಾಮ ಪಂಚಾಯಿತಿಯ ಎಳನೀರು, ಗುತ್ಯಡ್ಕ, ಬಡಾಮನೆ ಮೊದಲಾದ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಇದ್ದು, ಮೂಲಸೌಕರ್ಯದಿಂದ ಅಲ್ಲಿನ ಜನತೆ ವಂಚಿತರಾಗಿದ್ದಾರೆ. ಗ್ರಾಮ ಪಂಚಾಯಿತಿಗೆ ಬರಕಾದರೆ ಕೇವಲ 7 ಕಿ.ಮೀ. ದೂರವಿದೆ. ಆದರೆ ರಸ್ತೆಯ ವ್ಯವಸ್ಥೆ ಇಲ್ಲದೆ 120 ಕಿ.ಮೀ. ಸುತ್ತಿ ಬಳಸಿ ಬರಬೇಕಾಗಿದೆ. ಕಚ್ಚಾ ರಸ್ತೆ ಇದ್ದರೂ ಸರಿಪಡಿಸುವ ಹಾಗಿಲ್ಲ. ಅರಣ್ಯ ಇಲಾಖೆಯಿಂದಾಗಿ ವಿದ್ಯುತ್, ರಸ್ತೆ ಮರೀಚಿಕೆಯಾಗಿದೆ. ದಿಡುಪೆ-ಎಳ ನೀರು-ಸಂಸೆ ಸಂಪರ್ಕ ರಸ್ತೆ ಆದಲ್ಲಿ ಎಲ್ಲರಿಗೂ ಅನುಕೂಲ ಅದೀತು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಯರಾಮ ಅವರು ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದರು.

ಈ ಹಿಂದೆಯೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿದ್ದಾರೆ. ಅವರಲ್ಲಿಯೂ ಮನವಿ ಮಾಡಲಾಗಿದೆ.ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದಾಗ ’ಜಿಲ್ಲಾಧಿ ಕಾರಿಯವರ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾದರೆ ಮೊದಲಿನ ಡಿಸಿಯವರು ಬಗೆಹರಿಸುತ್ತಿದ್ದರು. ಕಾನೂನಾತ್ಮಕವಾಗಿ ಬಗೆಹರಿಸುವ ಸಮಸ್ಯೆಯಾಗಿದೆ. ಇದರ ಬಗ್ಗೆ ಡಿಎಫ್‍ಒ ಅವರಲ್ಲಿ ಮಾತನಾಡುತ್ತೇನೆ. ಒಂದು ವಾರದೊಳಗೆ ನಾನು, ಎಸ್‍ಪಿಯವರು ಹಾಗೂ ಡಿಎಫ್‍ಓ ಅವರು ಎಳನೀರಿಗೆ ಭೇಟಿ ನೀಡುತ್ತೇವೆ. ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ’ ಎಂದು ಜಿಲ್ಲಾಧಿಕಾರಿ ಹೇಳಿದರು. ಕಾನೂನು ಪಾಲನೆಯೊಂದಿಗೆ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಸ್‍ಪಿ ರವಿ ಕಾಂತೇ ಗೌಡ ಹೇಳಿದರು. ನೀರಿನ ಸಮಸ್ಯೆ, ಒಳ ಭಾಗಗಳಲ್ಲಿ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರು ತಿಳಿಸಿದರು.

ಕರಿಯಾಳ ಮತಗಟ್ಟೆಯಲ್ಲಿಯೂ ಸುಮಾರು 320 ಮತದಾರರಿದ್ದಾರೆ. ಅವರಿಗೆ ಕಾಜೂರು ಪರಿಸರಲ್ಲಿ ಮತದಾ ನಕ್ಕೆ ವ್ಯವಸ್ಥೆ ಮಾಡುವಂತೆ ಡಿಸಿಯವರಿಗೆ ಮನವಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಈ ಬಗ್ಗೆ  ಚಿಂತನೆ ನಡೆಸಲಾಗುವುದು. ಈ ಬಾರಿ ವಾಹನದ ವ್ಯವಸ್ಥೆಯನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.