ADVERTISEMENT

ನೂತನ ಕುಲಪತಿ ಭೈರಪ್ಪ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 9:03 IST
Last Updated 6 ಜೂನ್ 2014, 9:03 IST

ಮುಡಿಪು: ಮಂಗಳೂರು ವಿಶ್ವವಿದ್ಯಾ­ನಿಲಯದ ನೂತನ ಕುಲಪತಿಯಾಗಿ ಡಾ.ಕೆ.ಭೈರಪ್ಪ ಅವರು ಗುರುವಾರ ಪ್ರಭಾರ ಕುಲಪತಿ ಡಾ.ಎಚ್.­ನಾಗಲಿಂಗಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.  

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಕೆ.ಭೈರಪ್ಪ ಅವರು, ‘ಮಂಗಳೂರು ವಿವಿ ಕರ್ನಾಟಕದಲ್ಲಿ ಉತ್ತಮ ಹೆಸರು ಪಡೆದಿದೆ. ಈ ವಿಶ್ವವಿದ್ಯಾಲಯ ಕೇವಲ ಕರ್ನಾಟಕ ಮಾತ್ರವಲ್ಲ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ನನ್ನ
ಮುಖ್ಯ ಗುರಿ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆ ಪುಣ್ಯ ಕ್ಷೇತ್ರಗಳಿಗೆ ಪ್ರಸಿದ್ಧವಾದ ಜಿಲ್ಲೆ. ಇಲ್ಲಿ ಹಲವು ಶ್ರೇಷ್ಠ ಪುಣ್ಯ ಕ್ಷೇತ್ರಗಳಿದೆ. ಲಕ್ಷಾಂತರ ಜನ ಈ ಜಿಲ್ಲೆಗೆ ಬರು­ತ್ತಿರುತ್ತಾರೆ. ಅದೇ ರೀತಿ ಇದೂ ಒಂದು ಪುಣ್ಯ ಕ್ಷೇತ್ರದಂತೆ ಆಗಬೇಕು. ಮಂಗ­ಳೂರು ವಿವಿ ಟೆಂಪಲ್ ಆಫ್ ನಾಲೆಜ್‌ ಆಗಬೇಕು’ ಎಂದು ಹೇಳಿದರು.

‘ಮಂಗಳೂರು ವಿವಿಯನ್ನು ಉನ್ನತ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ನಾವೆ­ಲ್ಲರೂ  ಒಟ್ಟಿಗೆ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ವಿವಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 9 ವರ್ಷಗಳ ಕಾಲ ಆಡಳಿತ ನಡೆಸಿದ ಅನುಭವ­ದಿಂದ ಸಾಕಷ್ಟು ಕಲಿತಿದ್ದೇನೆ. ಎಲ್ಲ ವಿವಿಗಳಿಗೂ ಅನುದಾನ ಕೊರತೆ ಇರುವುದು ಸಹಜ. ಅದಕ್ಕಾಗಿ ಸರ್ಕಾರವನ್ನು ಮಾತ್ರ ಅವ­ಲಂಬಿಸದೆ ಹಣದ ಕೊರತೆ ನೀಗಿಸುವ ಸಲುವಾಗಿ ಸ್ಥಳೀಯರ ಸಹಾಯ ಪಡೆಯುತ್ತೇನೆ.

ಅವರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸ­ಬೇಕು ಎಂಬ ಗುರಿ ಇದೆ. ಅದಕ್ಕಾಗಿ ಆಡಳಿತ ವರ್ಗ, ಅಧ್ಯಾಪಕ ವರ್ಗ, ವಿದ್ಯಾರ್ಥಿ ವರ್ಗ ಸೇರಿಸಿಕೊಂಡು ಸಂಸ್ಥೆ­ಯನ್ನು ಬೆಳೆಸಲು ಪ್ರಯತ್ನಿಸಿದರೆ ಇನ್ನೂ ಚೆನ್ನಾಗಿ ಬೆಳೆಸಬಹುದು ಎಂಬ ನಂಬಿಕೆ ನನಗಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಪಡೆಯಲು ಪ್ರಯತ್ನಿಸುತ್ತೇನೆ’ ಎಂದರು.

ವಿವಿ ಕುಲಸಚಿವ ಪ್ರೊ.ಪಿ.ಎಸ್.­ಯಡಪಡಿತ್ತಾಯ, ಪರೀಕ್ಷಾಂಗ ಕುಲ­ಸಚಿವ ಪ್ರೊ.ಬಿ.ನಾರಾಯಣ, ಹಣ­ಕಾಸು ಅಧಿಕಾರಿ ಪ್ರೊ.ಬಿ.ಫಕೀರಪ್ಪ, ಉಪ ಕುಲಸಚಿವರಾದ ಪ್ರಭಾಕರ ನೀರುಮಾರ್ಗ ಹಾಗೂ ಡಾ.ಸಂಗಪ್ಪ, ವಿವಿ ನಿಕಾಯದ ಡೀನ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.