ಉಳ್ಳಾಲ: ಕೋಟೆಕಾರು ಗ್ರಾಮದ ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಇದೀಗ ಭಂಡಾರ ಮನೆಯ ನವೀಕರಣ ನಡೆದಿದೆ. ಈ ಪ್ರಯುಕ್ತ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭವು ಶುಕ್ರವಾರ ನಡೆಯಲಿದೆ. ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವೇಳೆ ನಡೆಯಲಿದೆ. ಜತೆಗೆ ಕ್ಷೇತ್ರದ ವರ್ಷಾವಧಿ ನಡಾವಳಿ ಉತ್ಸವ 19 ಹಾಗೂ 20ರಂದು ನಡೆಯಲಿದೆ.
ಕ್ಷೇತ್ರದ ಹಿನ್ನೆಲೆ: ಕೋಟೆಕಾರು ಗ್ರಾಮದ ಪಾಡಂಗರ ಭಗವತಿ ಕ್ಷೇತ್ರ ತೀಯಾ ಸಮಾಜದ ಬಂಗೇರ ಕುಟುಂಬಸ್ಥರ ಪ್ರಾಚೀನ ಕ್ಷೇತ್ರ. ಇಲ್ಲಿನ ಪ್ರಧಾನ ಶಕ್ತಿ ಪಾಡಂಗರ ಭಗವತಿಯಾಗಿದ್ದು, ಪುದಿಯೆ ಭಗವತಿ, ನಾಗದೇವರು, ವೈದ್ಯನಾಥ, ಪಂಜುರ್ಲಿ, ಗುಳಿಗ ಮೊದಲಾದ ದೈವೀ ಶಕ್ತಿಗಳನ್ನು ಆರಾಧಿಸಲಾಗುತ್ತಿದೆ. ತರವಾಡು ದೈವಗಳಾಗಿ ವಯನಾಡು, ಕುಲವನ್, ಕೊರತಿ, ಕಲ್ಲುರ್ಟಿ, ರಾಹು ಗುಳಿಗಾದಿ ದೈವಗಳನ್ನು ಆರಾಧಿಸಲಾಗುತ್ತಿದೆ.
ಕ್ಷೇತ್ರದ ಐತಿಹ್ಯದಂತೆ ಶ್ರೀಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ದಕ್ಷಿಣ ಕೇರಳದಿಂದ ಈ ಕಡೆಗೆ ಬಂದ ಶ್ರೀ ಭಗವತಿ ಮಾತೆಯ ಭಕ್ತೆಯಾಗಿದ್ದ ನೀಲಕಣ್ಣಿ ಎಂಬ ಹೆಸರಿನ ಮಹಿಳೆ ಇಲ್ಲಿ ಶ್ರೀ ಭಗವತಿ ಮಾತೆಯ ಆರಾಧನೆಗೆ ಮೂಲ ಕಾರಣಕರ್ತ ಎಂದು ನಂಬಲಾಗಿದ್ದು ಆಚಾರ, ನಿಷ್ಠೆ, ಭಕ್ತಿಗೆ ಒಲಿದ ಶ್ರೀ ಭಗವತಿ ಮಾತೆಯು ಆಕೆಯ ಇಚ್ಛೆಯಂತೆ ಮಾಡೂರಿನ ಈ ಪರಿಸರದಲ್ಲಿ ನೆಲೆಸಿದಳು. ಮುಂದೆ ಈ ಕ್ಷೇತ್ರವು ವ್ಯವಸ್ಥಿತ ಕ್ಷೇತ್ರವಾಗಿ ರೂಪುಗೊಂಡು ಬೆಳಗುತ್ತಾ ಬಂತು.
ಮಹಿಮಾ ಮಾತೆಯಾದ ನೀಲಕಣ್ಣಿ ದೈವಿಕ ಶಕ್ತಿಯಿಂದ ಮಾಯವಾಗಿ ದೈವೀ ಶಕ್ತಿಯಾಗಿ ದೈವ ಪರಿವಾರ ಸೇರಿ ನೀಲಜ್ಜಿ ಎಂಬ ಹೆಸರಿನಲ್ಲಿ ಸೇವೆ ಕೈಗೊಳ್ಳುತ್ತಾಳೆ. ಹೀಗಾಗಿ ಇಲ್ಲಿ ನಡಾವಳಿ ಸಮಯದಲ್ಲಿ ನೀಲಜ್ಜಿ ಸೇವೆ ನಡೆಯುತ್ತಾ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.