ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ಎಂಬಲ್ಲಿ ಸೋಮವಾರ ಅನ್ಯ ಕೋಮಿನ ವ್ಯಕ್ತಿ ಯೊಬ್ಬ ಹಿಂದೂ ಸಮುದಾಯದ ಬಾಲಕಿಯೊಬ್ಬಳನ್ನು ಚುಡಾಯಿಸಿದ ಪ್ರಕರಣ, ಸಂಪ್ಯ ಠಾಣೆಯ ಎದುರು ಅಕ್ರಮಕೂಟ ಸೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಚುಡಾಯಿಸಿದ ಆರೋಪದಲ್ಲಿ ಕೆಯ್ಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿನ ಯೂಸುಫ್ ಹಾಗೂ ಯೂಸುಫ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಡಗನ್ನೂರು ಗ್ರಾಮದ ಮೈಂದನಡ್ಕದ ಹರಿಶ್ಚಂದ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಪ್ಯ ಠಾಣೆಯ ಮುಂದೆ ಗುಂಪು ಸೇರಿದ ಆರೋಪದಲ್ಲಿ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ.
ಈ ಮಧ್ಯೆ, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಆರ್ಯಾಪು ಗ್ರಾಮದ ಮರಿಕೆ ನಿವಾಸಿ ಪುಟ್ಟಣ್ಣ ಎಂಬುವರು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಕೆಯ್ಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿನ ಯೂಸುಫ್ ಎಂಬಾತ ಸೋಮವಾರ ಮಧ್ಯಾಹ್ನ ಮೈರೋಳಿ ಎಂಬಲ್ಲಿ ಬಾಲಕಿಯೊಬ್ಬಳ ಪರಿಚಯ ಮಾಡಿಕೊಂಡು ಮೊಬೈಲ್ ನಂಬ್ರ ಕೊಡುವಂತೆ ಕೇಳಿದ್ದ. ಆಕೆಯ ಮನೆಯವರು ಈ ಬಗ್ಗೆ ಯೂಸುಫ್ನಲ್ಲಿ ವಿಚಾರಿಸಿದ್ದರು. ಈ ವಿಚಾರವನ್ನು ಸ್ಥಳೀಯ ಬಾಲಕನೊಬ್ಬ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದ ಎನ್ನಲಾಗಿದೆ. ಸಂಜೆ ತಂಡವೊಂದು ಯೂಸುಫ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಹಲ್ಲೆ ನಡೆಸಿದ ಆರೋಪದಲ್ಲಿ ಹರಿಶ್ಚಂದ್ರ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಘಟನೆಯ ಬೆನ್ನಲ್ಲೇ ಎರಡೂ ಕೋಮಿನ ಮಂದಿ ಸಂಪ್ಯ ಠಾಣೆಯ ಮುಂದೆ ಜಮಾಯಿಸಿದ್ದು, ಎಸ್ಪಿ ಸುಧೀರ್ಕುಮಾರ್ ರೆಡ್ಡಿ ಅವರು ಸಂಪ್ಯ ಠಾಣೆಗೆ ಬಂದು ಎಸ್ಐ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಬಳಿಕ ಲಘು ಲಾಠಿ ಪ್ರಹಾರ ನಡೆಸಿ ಅಲ್ಲಿದ್ದ ಮಂದಿಯನ್ನು ಚದುರಿಸಲಾಗಿತ್ತು. ಪ್ರತಿರೋಧ ಒಡ್ಡಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆಪಡೆದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.