ಬಂಟ್ವಾಳ: ತಾಲ್ಲೂಕಿನ ಸರಪಾಡಿ ಅಣೆಕಟ್ಟೆಯಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಸ್ಇ ಜೆಡ್)ಕ್ಕಾಗಿ ಇಲ್ಲಿನ ಬಂಟ್ವಾಳ-ಮೂಡುಬಿದಿರೆ ರಸ್ತೆ ನಡುವೆ ಹಾದುಹೋಗಲಿರುವ ಬೃಹತ್ ಗಾತ್ರದ ಪೈಪ್ಲೈನ್ ಅಳವಡಿಸಲು ಅಗೆದು ಹಾಕಲಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ.
ಕಳೆದ ಏಳೆಂಟು ತಿಂಗಳಿನಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಈಗಾಗಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿತ್ಯಾನಂದ ನಗರ ಸಹಿತ ಲೊರೆಟ್ಟೊ, ಭಂಡಸಾಲೆ, ಸೋರ್ನಾಡು, ಮುಲ್ಲಾರಪಟ್ನ ಮತ್ತಿತರ ಕಡೆಗಳಲ್ಲಿ ಬಿಸಿಲಿನ ವೇಳೆ ಧೂಳೆಬ್ಬಿಸುತ್ತಾ ಪೈಪ್ಲೈನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ಕೆಲವೆಡೆ ರಸ್ತೆ ವಿಸ್ತರಣೆ, ಹೊಸ ಮೋರಿ ಅಳವಡಿಕೆ ಮತ್ತು ಹಾನಿಗೀಡಾದ ರಸ್ತೆ ಬದಿ ತೇಪೆ ಡಾಂಬರೀಕರಣದಿಂದ ವಾಹನ ಸವಾರರು ಮತ್ತು ಸ್ಥಳೀಯರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ನಡುವೆ ಖಾಸಗಿ ಜಮೀನು ಅತಿಕ್ರಮಣ, ದೂರವಾಣಿ ಸಂಪರ್ಕ ಸ್ಥಗಿತ, ಕುಡಿಯುವ ನೀರು ಮತ್ತಿತರ ಪೈಪುಗಳಿಗೆ ಹಾನಿ ಮತ್ತಿತರ ದೂರು ಪೊಲೀಸ್ ಠಾಣೆ ಮೆಟ್ಟಿಲೇರಿ ಬಳಿಕ ಪ್ರತಿಭಟನೆಯೂ ನಡೆದಿತ್ತು.
ಈ ನಡುವೆ ಜಕ್ರಿಬೆಟ್ಟು ಮತ್ತು ಮಣಿಹಳ್ಳ ನಡುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹಲವೆಡೆ ಅನಧಿಕೃತವಾಗಿ ಪೈಪ್ಲೈನ್ ದಾಸ್ತಾನು ಮಾಡಿದೆ ಎಂದು ಇಲ್ಲಿನ ಬಳಕೆದಾರರ ವೇದಿಕೆ ಆರೋಪಿಸಿತ್ತು.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬಂಟ್ವಾಳ-ಮೂಡುಬಿದಿರೆ ರಸ್ತೆಯ ಸೋರ್ನಾಡು ಮತ್ತು ಎಸ್ವಿಎಸ್ ಕಾಲೇಜು ಬಳಿ ರಸ್ತೆಯುದ್ದಕ್ಕೂ ಕೆಸರು ತುಂಬಿಕೊಂಡಿದೆ. ಮಾತ್ರವಲ್ಲದೆ ರಸ್ತೆ ನಡುವೆಯೇ ಬೃಹತ್ ಗಾತ್ರದ ಹೊಂಡಗಳನ್ನು ಕೊರೆಯಲಾಗಿದೆ. ಇದರಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಎದುರಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ಮುಂಗಡ ಮೊತ್ತ ಪಾವತಿಸಿ ಕೈಗೊಳ್ಳುವ ಈ ಕಾಮಗಾರಿ ವೇಳೆ ಕೆಸರುಮಯ ರಸ್ತೆಗೆ ಜೆಲ್ಲಿ ಹುಡಿ ಅಥವಾ ಮರಳು ಹಾಕುವ ಮೂಲಕ ಇಲ್ಲಿ ಸಂಚರಿಸುವ ವಾಹನಗಳ ಚಕ್ರ ಜಾರುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.