ಮೂಡುಬಿದಿರೆ: ಇಲ್ಲಿನ ಬಸದಿಗಳಲ್ಲಿರುವ ಬೆಲೆಬಾಳುವ ಸ್ವತ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಎಲ್ಲಾ ಬಸದಿಗಳಿಗೆ ಆಧುನಿಕ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.
ಈಚೆಗೆ ಬೆಲೆಬಾಳುವ ವಿಗ್ರಹಗಳು ಕಳ್ಳತನವಾದ ಸಿದ್ಧಾಂತ ಮಂದಿರಕ್ಕೆ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.
ಸಿದ್ಧಾಂತ ಮಂದಿರದಲ್ಲಿ ಭದ್ರತಾ ವ್ಯವಸ್ಥೆಯ ಲೋಪ ಇದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. ಪುರಾತನ ವಿಗ್ರಹಗಳು ಕಳವಾಗಿರುವುದು ದುರದೃಷ್ಟಕರ. ಕಳವಾದ ಸ್ವತ್ತುಗಳನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದ ಪೊಲೀಸರ ಕಾರ್ಯ ಶ್ಲಾಘನಾರ್ಹ ಎಂದರು.
ಇಲ್ಲಿನ ಬಸದಿಗಳ ಸಂರಕ್ಷಣೆ ದೃಷ್ಟಿಯಿಂದ ಪೊಲೀಸ್ ಔಟ್ ಪೋಸ್ಟ್ ಸೇರಿದಂತೆ ಆಧುನಿಕ ರೀತಿಯ ಭದ್ರತಾ ವ್ಯವಸ್ಥೆ ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಪುರಾತತ್ವ ಇಲಾಖೆಯ ಸಹಕಾರವನ್ನು ಪಡೆಯಲಾಗುವುದು. ಅಲ್ಲಿನವರೆಗೆ ಬಸದಿಗಳಿಗೆ ಪೊಲೀಸ್ ರಕ್ಷಣೆ ಮುಂದುವರಿಯಲಿದೆ ಎಂದರು.
ನಿಡ್ಡೋಡಿಯ ಪ್ರಸ್ತಾವಿತ ಉಷ್ಣವಿದ್ಯುತ್ ಸ್ಥಾವರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾಪ ಇಲ್ಲದಿರುವುದರಿಂದ ನಾನು ಪ್ರತಿಕ್ರಿಯಿಸಲಾರೆ ಎಂದು ಚುಟುಕಾಗಿ ಉತ್ತರಿಸಿದರು. ಕಳವಾದ ವಿಗ್ರಹಗಳ ಚಿತ್ರಗಳನ್ನು ಜೈನಮಠದ ಭಟ್ಟಾರಕ ಚಾರುಕೀರ್ತಿ ಶ್ರಿಗಳು ವೀರಪ್ಪ ಮೊಯಿಲಿಯವರಿಗೆ ತೋರಿಸಿದರು.
ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್, ಧರ್ಮಸ್ಥಳದ ಸುರೇಂದ್ರ ಕುಮಾರ್, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಸಹಾಯಕ ಕಮಿಷನರ್ ಸದಾಶಿವ ಪ್ರಭು, ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಸುನೀಲ್ ಕೀರ್ತಿ ಎಂ ಮತ್ತಿತರರು ಜತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.