ಬಿಜೂರು (ಬೈಂದೂರು): ಭಾನುವಾರ ಇಲ್ಲಿನ ಅರೆಕಲ್ಲು ನದಿದಡ ಚಿತ್ರಕಲಾಸಕ್ತ ಮಕ್ಕಳ ಉತ್ಸಾಹ, ಉಲ್ಲಾಸ, ಸೃಜನಶೀಲ ಚಟುವಟಿಕೆಗಳ ವೇದಿಕೆಯಾಗಿ ಮಾರ್ಪಟ್ಟಿತು. ಕಾಗದದ ಹಾಳೆಯ ಸುರುಳಿ, ಬಣ್ಣದ ಪೆಟ್ಟಿಗೆ, ಕುಂಚ ಹಿಡಿದು ಅಲ್ಲಿಗೆ ಬಂದ 30 ಮಕ್ಕಳು ನದಿಯಂಚಿನ ಹಾಸುಗಲ್ಲಿನ ಮೇಲೆ ಕುಳಿತು, ಸುತ್ತಲಿನ ವರ್ಣಮಯ ಪ್ರಕೃತಿಯ ದೃಶ್ಯಗಳನ್ನು ನಿರುಕಿಸಿ ಆಸ್ವಾದಿಸಿದರು;
ಅವುಗಳನ್ನು ತಮ್ಮ ಮನಸ್ಸಿನಾಳಕ್ಕೆ ತುಂಬಿಸಿಕೊಂಡರು. ಅವುಗಳಿಗೆ ಕಲ್ಪನೆಯ ಚೌಕಟ್ಟು ನೀಡಿದರು. ಹಾಗೆ ಗ್ರಹಿಸಿದ ದೃಶ್ಯವನ್ನು ವಿವಿಧ ಬಣ್ಣಬಳಸಿ ಚಿತ್ರದ ರೂಪಕ್ಕಿಳಿಸಿದರು. ತಾವು ಗ್ರಹಿಸಿಕೊಂಡ ದೃಶ್ಯಕ್ಕೂ ಬಿಳಿಹಾಳೆಯ ಮೇಲೆ ತಾವು ಬಿಡಿಸಿ ಬಣ್ಣತುಂಬಿದ ಕಲಾಕರತಿಗೂ ಇರುವ ಹೋಲಿಕೆ, ವ್ಯತ್ಯಾಸಗಳನ್ನು ಅಳೆದು ತೂಗಿದರು. ತಮ್ಮನ್ನು ಅಲ್ಲಿಗೆ ಕರೆತಂದ ಉಪ್ಪುಂದದ ‘ನಮ್ಮ ಚಿತ್ತಾರ’ದ ಹಿರಿಯ ಕಲಾವಿದರಾದ ಮಂಜುನಾಥ ಮಯ್ಯ, ನರಸಿಂಹ ಆರ್, ಸುಪ್ರೀತ, ತ್ರಿವಿಕ್ರಮ ರಾವ್ ಅವರೊಡನೆ ವಿಚಾರ ವಿನಿಮಯ ಮಾಡಿ ದರು; ಅವರ ಮಾರ್ಗದರ್ಶನ ಪಡೆದರು. ಚಿತ್ರಗಳನ್ನು ಪರಿಷ್ಕರಿಸಿದರು. ಹೊಸರೂಪ ಪಡೆದು ಕಲಾತ್ಮಕತೆ ವೃದ್ಧಿಸಿಕೊಂಡ ತಮ್ಮ ಅಂತಿಮ ನಿರ್ಮಾಣಗಳನ್ನು ತಾವು ಕಂಡು ುದಗೊಂಡರು. ಸಹಚಿತ್ರಕಾರರೊಂದಿಗೆ ಹಂಚಿಕೊಂಡು ಸಂತೋಷಪಟ್ಟರು.
ಚಿತ್ರಕಲೆಯಲ್ಲಿ ಪ್ರಕೃತಿ ಚಿತ್ರಣ ಒಂದು ಪ್ರಧಾನ ಪ್ರಕಾರವಾಗಿರುವುದರಿಂದ ಉಪ್ಪುಂದದ ಶಂಕರ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಅದರ ಕುರಿತು ಪ್ರತ್ಯಕ್ಷ ಅನುಭವ ನೀಡುವ ಉದ್ದೇಶದಿಂದ ಈ ‘ಪ್ರಕೃತಿ ನಡುವೆ ಕಲಾ ಪ್ರಾತ್ಯಕ್ಷಿಕೆ’ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.