ADVERTISEMENT

ಬೆಂಬಲ ಬೆಲೆ ಇಳಿಸುವ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 8:25 IST
Last Updated 19 ಮಾರ್ಚ್ 2011, 8:25 IST
ಬೆಂಬಲ ಬೆಲೆ ಇಳಿಸುವ ಹುನ್ನಾರ: ಆರೋಪ
ಬೆಂಬಲ ಬೆಲೆ ಇಳಿಸುವ ಹುನ್ನಾರ: ಆರೋಪ   

ಸುಳ್ಯ: ಪ್ರಸ್ತುತ ಅಡಿಕೆಗೆ 90 ರೂಪಾಯಿ ಧಾರಣೆ ಇದ್ದು, ಅದನ್ನು 70 ರೂಪಾಯಿಗೆ ಇಳಿಸುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿ ಸಹಕಾರಿ ಸಂಸ್ಥೆಗಳನ್ನು ಉದ್ಧಾರ ಮಾಡಲು ಹೊರಟಿದೆ ಎಂದು ರೈತ ಸಂಘ ದ.ಕ. ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿಕಿರಣ ಪುಣಚ ಆರೋಪಿಸಿದರು.

ಹಳದಿ ಎಲೆ ರೋಗ ಪೀಡಿತ ಸಂಪಾಜೆ ಹಾಗೂ ಚೆಂಬು ಗ್ರಾಮಗಳ ಅಡಿಕೆ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದ ಅವರು, ಬಜೆಟ್‌ಗೆ ಮುನ್ನ ರೈತ ಸಂಘ ಮುಖ್ಯಮಂತ್ರಿಯನ್ನು ಕಂಡು ಮನವಿ ಮಾಡಿದ್ದರೂ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ, ಬದಲಿಗೆ ಕೇವಲ ಸಂಶೋಧನೆಗೆ 2 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೇಂದ್ರ ಸರ್ಕಾರ 300 ಕೋಟಿ ರೂಪಾಯಿ ಪ್ಯಾಕೇಜ್ ಇಟ್ಟಿದ್ದರೂ ಯಾವ ಉದ್ದೇಶಕ್ಕೆ ಎಂದು ತಿಳಿಸಿಲ್ಲ ಎಂದರು.

ರಾಜ್ಯದ ಅಡಿಕೆ ಬೆಳೆಗಾರರು ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ 700 ಕೋಟಿ ರೂಪಾಯಿ ಸಾಲ ಪಡೆದಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ ಒಟ್ಟು 1200 ಕೋಟಿ ಸಾಲ ಪಡೆದಿದ್ದಾರೆ. ಇದನ್ನು ಮನ್ನಾ ಮಾಡಲು ಅಷ್ಟು ಮೊತ್ತದ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಆಗ್ರಹಿಸಿದರು. ಕೇರಳ ಸರ್ಕಾರ ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳಿಗೆ 4 ವರ್ಷಗಳ ಹಿಂದೆಯೇ 17 ಕೋಟಿ ರೂಪಾಯಿ ಪರಿಹಾರ ನೀಡಿದೆ. ಆದರೆ ರಾಜ್ಯ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ ಎಂದು ದೂರಿದರು.

ಶಾಸಕರನ್ನು ಕಟ್ಟಿಹಾಕಿ: ಅಡಿಕೆ ತೋಟಕ್ಕೆ ಹಳದಿ ರೋಗ ಬಂದು ರೈತರು ಸಾಲ ತೀರಿಸಲಾಗದೇ ಬವಣೆ ಪಡುತ್ತಿರುವಾಗ ಕೈ ಕಟ್ಟಿ ಕುಳಿತ ಸ್ಥಳೀಯ ಶಾಸಕರನ್ನು ಕಟ್ಟಿ ಹಾಕಿದರೆ ಮಾತ್ರ ಸರ್ಕಾರವೇ ನಿಮ್ಮ ಬಳಿಗೆ ಬರುತ್ತದೆ, ಅವರೇ ಸಮಸ್ಯೆಗಳಿಗೆ ಉತ್ತರ ನೀಡುತ್ತಾರೆ ಎಂದು ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ ಗುಡುಗಿದರು.

 ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಹಾರ ನೀಡುತ್ತಾರೆ. ರೈತರ ಸಾಲಕ್ಕೆ ಸರ್ಕಾರ ಹಾಗೂ ಅಧಿಕಾರಿಗಳೇ ಹೊಣೆ, ರೈತರಲ್ಲ. ಬೇರೆ ಜಿಲ್ಲೆಗಳಲ್ಲಿ ಸಾಲ ಮನ್ನಾ ಆಗಿದೆ. ಇಲ್ಲಿ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.  ರೈತರ ಪಾಲಿಗೆ ರಾಜಕಾರಣಿಗಳೇ ದೊಡ್ಡ ಮೋಸಗಾರರು. ರೈತರನ್ನು ಒಗ್ಗಟ್ಟಾಗಲು ಬಿಡುತ್ತಿಲ್ಲ, ಕೃಷಿ ತಜ್ಞರಿಂದ, ವಿಜ್ಞಾನಿಗಳಿಂದ ಇಂದು ದೇಶ ಹಾಳಾಗಿದೆ. ಇವರು ಮಾರ್ಗದರ್ಶನ ಮಾಡುವ ಬದಲು ರೈತರ ದಿಕ್ಕನ್ನು ತಪ್ಪಿಸುತ್ತಾರೆ ಎಂದು ದೂರಿದರು.

 ಅಡಿಕೆ ಹಳದಿ ಎಲೆ ರೋಗದ ಹೋರಾಟ ತುಂಬಾ ತಡವಾಗಿದೆ. ಮುಂದಿನ ದಿನಗಳಲ್ಲಿ ರೈತ ಸಂಘ ನಡೆಸುವ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ರೈತ ಸಂಘದ ಮುಂಖಂಡರಾದ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಧರ ಶೆಟ್ಟಿ, ಈಶ್ವರ ಭಟ್ ಬಡಿಲ, ಆನಂದಗೌಡ, ಸಿರಿಲ್ ಕ್ರಾಸ್ತಾ, ಶ್ರೀನಿವಾಸ ನಿಡಿಂಜೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.