ADVERTISEMENT

ಬೈಕಂಪಾಡಿ:ರಾತ್ರೋರಾತ್ರಿ ಕಟ್ಟಡ ನೆಲಸಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 5:35 IST
Last Updated 25 ಡಿಸೆಂಬರ್ 2017, 5:35 IST
ಮಂಗಳೂರಿನ ಬೈಕಂಪಾಡಿಯಲ್ಲಿ ಭಾನುವಾರ ಬೆಳಗ್ಗಿನ ಜಾವ ಕಟ್ಟಡವೊಂದನ್ನು ನೆಲಸಮಗೊಳಿಸಿರುವುದು.
ಮಂಗಳೂರಿನ ಬೈಕಂಪಾಡಿಯಲ್ಲಿ ಭಾನುವಾರ ಬೆಳಗ್ಗಿನ ಜಾವ ಕಟ್ಟಡವೊಂದನ್ನು ನೆಲಸಮಗೊಳಿಸಿರುವುದು.   

ಮಂಗಳೂರು: ನಗರದ ಬೈಕಂಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 66) ಬದಿಯಲ್ಲಿದ್ದ ಕಟ್ಟಡವೊಂದನ್ನು ಭಾನುವಾರ ನಸುಕಿನ ಜಾವ ತಂಡವೊಂದು ನಿಗೂಢವಾಗಿ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದೆ. ಎಂಟು ಮಳಿಗೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಒಂದು ಮದ್ಯದಂಗಡಿ, ಮೂರು ಹೋಟೆಲ್‌, ಎರಡು ದಿನಸಿ ಅಂಗಡಿ, ಒಂದು ಸ್ಟೇಷನರಿ ಮಳಿಗೆ, ಒಂದು ತರಕಾರಿ ಅಂಗಡಿಗಳಲ್ಲಿದ್ದ ಬಹುತೇಕ ವಸ್ತುಗಳು ಧ್ವಂಸಗೊಂಡಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಲಪಾಡಿಯಿಂದ ಕುಂದಾಪುರದ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭೂಸ್ವಾಧೀನಗೊಂಡಿರುವ ಸ್ಥಳಗಳಲ್ಲಿರುವ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಿರುವಾಗಲೇ ಈ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾರ್ಯಾಚರಣೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ.

ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಎಂಟೂ ವರ್ತಕರು ಪಣಂಬೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಟ್ಟಡದ ಮಾಲೀಕ ಶ್ರೀನಿವಾಸ ಪಟೇಲ್‌ ಅವರ ಪುತ್ರ ರಾಜೇಂದ್ರ ಮತ್ತು ಕಾರ್ಯಾಚರಣೆಗೆ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಒದಗಿಸಿದವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

ADVERTISEMENT

ಕಠಿಣ ಕ್ರಮಕ್ಕೆ ಆಗ್ರಹ

ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಮತ್ತು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಭಾನುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘50 ವರ್ಷಗಳಿಂದ ಇದ್ದ ಕಟ್ಟಡವನ್ನು ರಾತ್ರೋರಾತ್ರಿ ಕೆಡವಿರುವುದರ ಹಿಂದೆ ಸಂಚು ಅಡಗಿದೆ. ಎನ್‌ಎಚ್‌ಎಐ ಅಧಿಕಾರಿಗಳೂ ಇದರಲ್ಲಿ ಕೈಜೋಡಿಸಿದಂತೆ ಕಾಣುತ್ತಿದೆ. ಇದು ಅತ್ಯಂತ ಅಮಾನುಷ ಕೆಲಸ’ ಎಂದು ಮುನೀರ್‌ ಕಾಟಿಪಳ್ಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.