ADVERTISEMENT

ಮಳೆಗೆ ತೋಯುತ್ತಿದೆ ಶಾಲಾ ಬೈಸಿಕಲ್!

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 11:25 IST
Last Updated 15 ಜೂನ್ 2011, 11:25 IST

ಉಪ್ಪಿನಂಗಡಿ: ಈ ಭಾಗದ ಸರ್ಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡುವ ಬೈಸಿಕಲ್ ಜೋಡಣೆ ಕಾರ್ಯ ಉಪ್ಪಿನಂಗಡಿಯಲ್ಲಿ ಆರಂಭವಾಗಿದೆ. ಶಾಲೆಗೆ ಪೂರೈಕೆ ಮಾಡಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.

ಉಪ್ಪಿನಂಗಡಿ ಭಾಗದ ಶಾಲೆಯಲ್ಲಿ ವಿತರಣೆ ಆಗಲಿರುವ ಬೈಸಿಕಲ್‌ಗಳ ಪೈಕಿ ಸುಮಾರು 1600 ಸೈಕಲ್‌ಗಳ ಜೋಡಣೆ ಕಾರ್ಯ ಇಲ್ಲಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಇರುವ ಸಿ.ಆರ್.ಪಿ. ಕಚೇರಿ ಬಳಿ ನಡೆಯುತ್ತಿದೆ. ಎರಡು ಪ್ರತ್ಯೇಕ ಕಡೆಯಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಯ 22 ಮಂದಿ ಸೈಕಲ್ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ.

2010-11ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಸರ್ಕಾರ ಬೈಸಿಕಲ್ ನೀಡುವ ಬದಲಿಗೆ ಹಣ ನೀಡುವ ಬಗ್ಗೆ ತೀರ್ಮಾನ ಆಗಿ ಬಳಿಕದ ಬೆಳವಣಿಗೆಯಲ್ಲಿ ವಿಧಾನ ಸಭೆಯಲ್ಲಿ ಗದ್ದಲ ನಡೆದು ಸರ್ಕಾರ ಹಣ ನೀಡುವ ತೀರ್ಮಾನದಿಂದ ಹಿಂದೆ ಸರಿದು ಬೈಸಿಕಲ್ ನೀಡುವುದಾಗಿ ಮತ್ತೆ ತೀರ್ಮಾನಿಸಿತ್ತು.

ಆದರೆ ಸೈಕಲ್ ನೀಡಿರಲಿಲ್ಲ. ಇದೀಗ 2010-11ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ (ಪ್ರಸಕ್ತ 9ನೇ ತರಗತಿಯಲ್ಲಿ ಇರುವ) ಮತ್ತು 2011-12ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವವರಿಗೆ ಈ ರೀತಿಯಾಗಿ ಎರಡೂ ವಿದ್ಯಾರ್ಥಿಗಳಿಗೂ ಬೈಸಿಕಲ್ ದೊರಕಲಿದೆ.

ಬೈಸಿಕಲ್ ಮಳೆ ನೀರಿಗೆ ತೋಯುತ್ತಿದೆ:  ಬೈಸಿಕಲ್ ಬಿಡಿ ಭಾಗಗಳನ್ನು ಎಲ್ಲಡೆ ರಾಶಿ ಹಾಕಲಾಗಿದೆ. ಸೈಕಲ್‌ನ ಪ್ರೇಮು, ರಿಮ್ಮು, ಗಾರ್ಡ್ ಇತ್ಯಾದಿ ಸ್ಟೀಲ್ ಲೇಪಿದ ಬಿಡಿ ಭಾಗಗಳನ್ನು ಎಲ್ಲೆಡೆ ಹಾಕಲಾಗಿದ್ದು ಮಳೆ ನೀರಿಗೆ ತೋಯುತ್ತಿದೆ. ಸಿದ್ಧ ಪಡಿಸಿದ ಸೈಕಲ್‌ಗಳನ್ನು ಚರಂಡಿ ಬದಿಯಲ್ಲಿ ನಿಲ್ಲಿಸಲಾಗಿದೆ. ಇವುಗಳ ಮೇಲೆಯೇ ಚರಂಡಿ ನೀರು ಹರಿದು ಹೋಗುತ್ತದೆ.

ಮೊದಲಿನಿಂದಲೂ ಕಳಪೆ ಸೈಕಲ್ ಎಂಬ ಆರೋಪ ಇದೆ. ಇನ್ನು ಈ ರೀತಿಯಾಗಿ ನೀರು ಬಿದ್ದು ಮಕ್ಕಳ ಕೈಗೆ ನೀಡುವ ಸಂದರ್ಭದಲ್ಲಿ ಅದು ತುಕ್ಕು ಹಿಡಿದಿರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬ ಮಾತಗಳು ಕೇಳಿ ಬರುತ್ತಿದೆ.

6872 ಸೈಕಲ್ ವಿತರಣೆಗೆ ಕ್ರಮ:  ಪುತ್ತೂರು ತಾಲ್ಲೂಕಿಗೆ 8ನೇ ತರಗತಿಯಲ್ಲಿ 1632 ಹೆಣ್ಣು ಮಕ್ಕಳಿಗೆ, 1591 ಗಂಡು ಮಕ್ಕಳಿಗೆ ಮತ್ತು 9ನೇ ತರಗತಿಯಲ್ಲಿ 1875 ಹೆಣ್ಣು ಮಕ್ಕಳಿಗೆ, 1774 ಗಂಡು ಮಕ್ಕಳಿಗೆ ಹೀಗೆ ಒಟ್ಟು 6872 ಸೈಕಲ್ ಆಗಮಿಸಿದೆ. ಇದರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷನಯನ ಕಾರಿಂಜ `ಪ್ರಜಾವಾಣಿ~ಗೆ ತಿಳಿಸಿದರು.
ಸಿದ್ದಿಕ್ ನೀರಾಜೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.