ADVERTISEMENT

ಮಹಾತ್ಮ ಗಾಂಧಿ ಕೊಲೆ ಪುನರಾವರ್ತನೆ: ಡಾ. ರಾವ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 11:21 IST
Last Updated 8 ಫೆಬ್ರುವರಿ 2013, 11:21 IST
ಕುಂದಾಪುರದ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ `ಗಾಂಧಿ ಸ್ಮೃತಿ' ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ.ಬಿ. ಸುರೇಂದ್ರ ರಾವ್ ಆಶಯ ಭಾಷಣ ಮಾಡಿದರು
ಕುಂದಾಪುರದ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ `ಗಾಂಧಿ ಸ್ಮೃತಿ' ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ.ಬಿ. ಸುರೇಂದ್ರ ರಾವ್ ಆಶಯ ಭಾಷಣ ಮಾಡಿದರು   

ಕುಂದಾಪುರ: ಗೋಡ್ಸೆ ಗಾಂಧೀಜಿಯನ್ನು ಕೊಂದಿದ್ದು ಒಂದು ಬಾರಿ ಮಾತ್ರ, ಅದಾದ ನಂತರ ನಿರಂತರವಾಗಿ ಗಾಂಧೀಜಿಯನ್ನು ಕೊಲ್ಲುವಂತಹ ಘಟನೆಗಳು ನಮ್ಮ ದೇಶದಲ್ಲಿ ಪುನರಾವರ್ತನೆಯಾಗುತ್ತಿವೆ.

ಗಾಂಧೀಜಿಯ ಬಗ್ಗೆ ನಾವು ತಿಳಿದುಕೊಂಡಿರುವುದೇ ಹೆಚ್ಚು ಎನ್ನುವ ಅಹಂ ಭಾವದಲ್ಲಿ ಕೆಲವರು ಗಾಂಧಿಯನ್ನು ಕೊಂದರೆ, ಇನ್ನೂ ಕೆಲವರು ಗಾಂಧೀಜಿ ಯಾರೆಂಬುದು ಗೊತ್ತೆ ಇಲ್ಲ ಎನ್ನುವ ಜಾಣತನದೊಂದಿಗೆ ಅವರನ್ನು ಕೊಲ್ಲುತ್ತಿದ್ದಾರೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ನಿವೃತ್ತ ಉಪನ್ಯಾಸಕ ಡಾ.ಬಿ.ಸುರೇಂದ್ರ ರಾವ್ ಹೇಳಿದರು.

ಸಹಮತ ಕುಂದಾಪುರ ಹಾಗೂ ಬದುಕು ಬಳಗ ಸಮಿತಿಯ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ `ಗಾಂಧಿ ಸ್ಮೃತಿ' ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾತನಾಡಿದರು.

ADVERTISEMENT

ಓದುತ್ತಾ ಹೋದಂತೆ ಇನ್ನಷ್ಟು ತಿಳಿಯುವ ಕುತೂಹಲ ಮೂಡಿಸುವ ಅಪರೂಪದ ಗಾಂಧೀಜಿಯ ವ್ಯಕ್ತಿತ್ವವನ್ನಷ್ಟೇ ಅರ್ಥ ಮಾಡಿಕೊಳ್ಳುವವರು ಅವರ ಆದರ್ಶಗಳನ್ನು ಮಣ್ಣುಪಾಲು ಮಾಡುತ್ತಲೇ ಅವರ ಹೆಸರಿನಲ್ಲೆೀ ಭ್ರಷ್ಟಾಚಾರ ಮಾಡುತ್ತಿದ್ದಾರೆ.

ಗಾಂಧೀಜಿ ಇತಿಹಾಸ ಪುರುಷ ಎನ್ನುವ ಭ್ರಮೆ ಬೆಳೆದು ಬಿಟ್ಟಿದೆ. ಗಾಂಧೀಜಿಯನ್ನು ಅಭ್ಯಾಸ ಮಾಡುವವರು ಅವರ ಜೀವನದ ಇತರ ಮಗ್ಗುಲುಗಳನ್ನೂ ಅರ್ಥ ಮಾಡಿಕೊಂಡಾಗ ಗಾಂಧಿಯವರ ನಡೆ-ನುಡಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯ ಎಂದು ಅವರು ಸಲಹೆ ನೀಡಿದರು..ದಕ್ಷಿಣ ರೋಟರಿ ಅಧ್ಯಕ್ಷ ವಿವಿಯೆನ್ ಕ್ರಾಸ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ  ಅವರು ಜಾಗತೀಕರಣದಿಂದಾಗಿ ನಮ್ಮಲ್ಲಿನ ಭಾವನೆಗಳು ಸಾಯುತ್ತಿದೆ. ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಗಾಂಧೀಜಿಯ ತತ್ವಾದರ್ಶಗಳ ನೆನಪು ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು, ಸಹಮತದ ವಲೇರಿಯನ್ ಮಿನೇಜಿಯಸ್, ಕುಂದಾಪುರ ವಲಯದ ಧರ್ಮಗುರು ಅನಿಲ್ ಡಿ ಸೋಜಾ  ಮತ್ತಿತರರು ಸಮಾರಂದಲ್ಲಿ ಉಪಸ್ಥಿತರಿದ್ದರು.ಸಹಮತದ ಸಂಚಾಲಕ ಶಶಿಧರ ಹೆಮ್ಮೋಡಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಜಾನ್ಸನ್ ಡಿ  ಅಲ್ಮೇಡಾ ಸ್ವಾಗತಿಸಿದರು. ಕರ್ನಾಟಕ ಬ್ಯಾರಿ ಅಕಾಡೆಮಿಯ ಸದಸ್ಯ ಯಾಕೂಬ್ ಖಾದರ ಗುಲ್ವಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.